ಚಾಮರಾಜನಗರ: ಕೊರೊನಾ ಸೋಂಕಿನ ಭೀತಿ ಸಾಮೂಹಿಕ ವಿವಾಹ ಮಹೋತ್ಸವ, ದೇವಸ್ಥಾನದ ಉದ್ಘಾಟನೆಯಂತಹ ಕಾರ್ಯಕ್ರಮಗಳಿಗೂ ತಟ್ಟಿದೆ.
ಚಾಮರಾಜನಗರ ಜಿಲ್ಲೆ ಹರವೆ ಮಠದಲ್ಲಿ ಭಾನುವಾರ ನಡೆಯಬೇಕಿದ್ದ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.
ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ನಿರ್ಬಂಧಿಸಿರುವುದರಿಂದ ಭಾನುವಾರ ನಡೆಯಬೇಕಿದ್ದ ವೀರಶೈವ ಲಿಂಗಾಯತ ವಧು-ವರರ ಸಾಮೂಹಿಕ ವಿವಾಹ ಸಮಾರಂಭ, ಧಾರ್ಮಿಕ ಸಭೆ, ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರಗಳನ್ನು ಮುಂದೂಡಲಾಗಿದೆ ಎಂದು ಮಠದ ಸರ್ಪಭೂಷಣ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಮಹದೇಶ್ವರ ದೇವಸ್ಥಾನದ ಉದ್ಘಾಟನೆಗೂ ಕೊರೊನಾ ವೈರಸ್ ಭೀತಿಯ ಬಿಸಿ ತಟ್ಟಿದೆ. ಚಾಮರಾಜನಗರ ತಾಲೂಕು ಬೆಟ್ಟದಪುರದಲ್ಲಿ ಮಾರ್ಚ್ 16ರಂದು ನಡೆಯಬೇಕಿದ್ದ ಶ್ರೀ ಮಹದೇಶ್ವರ ದೇವಸ್ಥಾನದ ಉದ್ಘಾಟನಾ ಸಮಾರಂಭ ಹಾಗೂ ಧಾರ್ಮಿಕ ಸಭೆಗಳನ್ನು ಮುಂದೂಡಲಾಗಿದೆ. ಸಿದ್ದಗಂಗಾ ಹಾಗು ಸುತ್ತೂರು ಶ್ರೀಗಳು ಈ ದೇವಸ್ಥಾನವನ್ನು ಉದ್ಘಾಟಿಸಬೇಕಿತ್ತು.