ಮಂಡ್ಯ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಮಂಡ್ಯದ ಯೋಧ ಗುರು ಹುತಾತ್ಮರಾಗಿದ್ದು, ಇದೀಗ ಜಿಲ್ಲೆಯಲ್ಲಿ ನೀರವ ಮೌನ ಆವರಿಸಿದೆ. ಗುರುವನ್ನು ನೆನಪು ಮಾಡಿಕೊಂಡು ಅವರ ಶಿಕ್ಷಕರು ಸಂತಾಪ ಸೂಚಿಸುವ ವೇಳೆ ಭಾವುಕರಾಗಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ, ಕೆಎಂ ದೊಡ್ಡಿಯಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಿಂದ 10ನೇ ತರಗತಿಯವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ. ಗುರುವಾರ ಅವರು ಹುತಾತ್ಮರಾದ ಹಿನ್ನೆಲೆಯಲ್ಲಿ ಅವರು ಓದಿದ ಶಾಲೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಂತಾಪ ಸೂಚಿಸಿದರು. ಈ ವೇಳೆ ಗುರು ಅವರಿಗೆ ಪಾಠ ಮಾಡಿದ ಶಿಕ್ಷಕರು ಭಾವುಕರಾದರು.
ಶಿಕ್ಷಕಿ ಲತಾ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, “ಗುರು ಶಾಲೆಯಲ್ಲಿ ತುಂಬಾ ಒಳ್ಳೆ ವಿದ್ಯಾರ್ಥಿ. ಓದಿನಲ್ಲಿ ಮಾತ್ರವಲ್ಲದೇ ಇತರ ಚಟುವಟಿಕೆಯಲ್ಲಿ ತುಂಬಾ ಸಕ್ರಿಯರಾಗಿ ಭಾಗಿಯಾಗುತ್ತಿದ್ದರು. ನಿಮ್ಮ ಭವಿಷ್ಯ ಏನು ಎಂದು ಕೇಳುತ್ತಿದ್ದಾಗ ಗುರು ಹಾಗೂ ಅವರ ಸ್ನೇಹಿತರು ನಾವು ಸೈನಿಕರಾಗುತ್ತೇವೆ ಎಂದು ಉತ್ತರಿಸಿದ್ದರು” ಎಂದು ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.
ಗುರು ನಮ್ಮ ಶಾಲೆಯಲ್ಲಿ ಓದಿದ್ದಾರೆ ಎಂಬ ಹೆಮ್ಮೆ ಒಂದು ಕಡೆ ಇದ್ದರೆ, ಮತ್ತೊಂದೆಡೆ ದೇಶ ಪ್ರೇಮ ಇಟ್ಟುಕೊಂಡು ದೇಶ ಸೇವೆ ಮಾಡಬೇಕು ಎಂದು ಸೈನ್ಯ ಸೇರಿದ ಗುರು ಅವರು ಉಗ್ರರ ದಾಳಿಗೆ ಬಲಿಯಾಗಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಗುರು ಅವರ ಮದುವೆ ಆಗಿ ಕೇವಲ 8 ತಿಂಗಳು ಎಂಬ ವಿಷಯ ತಿಳಿಯಿತು. ಗುರು ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಧೈರ್ಯ ಸಿಗಲಿ. ಉಗ್ರರಿಗೆ ತಕ್ಕ ಶಿಕ್ಷೆ ಆಗಬೇಕು ಹಾಗೂ ಮುಂದೆ ಈ ರೀತಿ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಲತಾ ಹೇಳಿದರು.
https://www.youtube.com/watch?v=P8Y_QHDFbO4&feature=youtu.be
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv