– ಮಗನ ಪ್ರತೀ ಮಾತುಗಳನ್ನು ನೆನಪಿಸಿಕೊಂಡು ತಾಯಿ ಕಣ್ಣೀರು
ಮಂಡ್ಯ: ನಾನು ದೇಶ ಸೇವೆ ಮಾಡಿ ಬರುತ್ತೇನೆ. ನಾನು ವೀರಮರಣ ಹೊಂದಿದರೆ ಯಾವುದೇ ಪ್ರಧಾನಿಗೆ ಸಿಗದ ಮುಕ್ತಿ ನನಗೆ ಸಿಗುತ್ತದೆ ಎಂದು ಹುತಾತ್ಮ ಗುರು ಅವರು ಈ ಹಿಂದೆ ತಮ್ಮ ತಾಯಿ ಬಳಿ ಹೇಳಿಕೊಂಡಿದ್ದು, ಈ ಮಾತನ್ನು ಇಂದು ತಾಯಿ ನೆನಪಿಸಿಕೊಂಡು ಕಣ್ಣೀರು ಹಾಕುತ್ತಿದ್ದಾರೆ.
ಇದೀಗ ಮಗನೇ ಇಲ್ಲದ ಮೇಲೆ ಆ ಮುಕ್ತಿ ಇಟ್ಟುಕೊಂಡು ನಾವು ಏನೂ ಮಾಡಬೇಕು. ಗುರುವಿಗೆ ಮದುವೆ ಆಗಿ 8 ತಿಂಗಳು ಆಗಿತ್ತು. ನನ್ನ ಮಗ ಚೆನ್ನಾಗಿ ಇರಲಿ ಎಂದು ಮಗನಿಗೆ ಮದುವೆ ಮಾಡಿದೆ. ಬಳಿಕ ಕೆಲಸಕ್ಕೆ ಹೋಗೋದು ಬೇಡ ಎಂದು ಹೇಳಿದ್ದೆ. ಆದರೆ ನಾನು ದೇಶ ಸೇವೆ ಮಾಡಬೇಕು ಎಂದು ಹಠದಲ್ಲಿ ರಜೆ ಮುಗಿಸಿಕೊಂಡು ಹೋದವನು ಹಿಂದಿರುಗಿ ಬರಲೇ ಇಲ್ಲ ಎಂದು ಹುತಾತ್ಮ ಯೋಧ ಗುರು ತಾಯಿ ಚಿಕ್ಕೋಳಮ್ಮ ಅವರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ: ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ
ನಾನು ಪ್ರಧಾನಿಗೆ ಏನು ಕೇಳಲಿ. ನನಗೆ ಕೇಳಲು ಆ ಶಕ್ತಿ ಇಲ್ಲ. ನನ್ನ ಮನೆಯ ಬದುಕೇ ಹೋದ ಮೇಲೆ ನಾನು ಪ್ರಧಾನಿ ಬಳಿ ಏನೂ ಕೇಳಲಿ ಎಂದು ವೀರಯೋಧ ಗುರು ಅವರ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: 2 ನಿಮಿಷ ಬಿಟ್ಟು ಕರೆ ಮಾಡ್ತೀನಿ ಅಂದೋನು ಮಾಡ್ಲೇ ಇಲ್ಲ- ಗುರು ಗೆಳೆಯ ಯೋಧ ಕಣ್ಣೀರು
ಉಗ್ರರಿಗೆ ಶಿಕ್ಷೆ ನೀಡಿದರೆ, ನನ್ನ ಮಗ ಬದುಕಿ ಬರುತ್ತಾನಾ? ಅವರಿಗೆ ಶಿಕ್ಷೆ ನೀಡಿದರೆ ನನ್ನ ಮಗ ಹಿಂದಿರುಗಿ ಬರಲ್ಲ. ಮಗನೇ ಇಲ್ಲದ ಮೇಲೆ ಅವನ ಕೊಂದವರಿಗೆ ಏನು ಶಾಪ ಹಾಕಲಿ. ಅವರ ಮಕ್ಕಳು ಕೂಡ ಚೆನ್ನಾಗಿ ಇರಲಿ ಎಂದು ಮಾತೃ ಹೃದಯ ಕಣ್ಣೀರು ಹಾಕುತ್ತಿದ್ದು ನೋಡುಗರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv