– ತಂದೆ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆಗೆ ವ್ಯವಸ್ಥೆ
ಮಡಿಕೇರಿ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಪೂಂಚ್ನಲ್ಲಿ ಸಂಭವಿಸಿದ ಸೇನಾ ವಾಹನ ಅಪಘಾತದಲ್ಲಿ ಗಾಯಗೊಂಡು ಕೊನೆಯುಸಿರೆಳೆದ ಯೋಧ ಕೊಡಗಿನ ದಿವಿನ್ (28) ಅಂತ್ಯಕ್ರಿಯೆ ಬುಧವಾರ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರ ಗ್ರಾಮದಲ್ಲಿ ನಡೆಯಲಿದೆ.
ಶ್ರೀನಗರ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿವಿನ್ ಕಳೆದ ಎರಡು ದಿನಗಳ ಹಿಂದಷ್ಟೇ ಹುತಾತ್ಮರಾದರು. ಇಂದು (ಡಿ.31) ಶ್ರೀನಗರದಿಂದ ವಿಶೇಷ ವಿಮಾನದ ಮೂಲಕ ದಿವಿನ್ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತರಲಾಯಿತು. ಈ ಸಂದರ್ಭ ಮೈಸೂರು – ಕೊಡಗು ಸಂಸದ ಯದುವೀರ್ ಒಡೆಯರ್ ಅವರು ವೀರ ಯೋಧನಿಗೆ ನಮನ ಸಲ್ಲಿಸಿದರು. ಇದನ್ನೂ ಓದಿ: ಹುತಾತ್ಮ ಯೋಧ ದಿವಿನ್ ಮದುವೆಗೆ ಇನ್ನೆರಡು ತಿಂಗಳು ಬಾಕಿಯಿತ್ತು, ಲಗ್ನಪತ್ರಿಕೆಯೂ ಪ್ರಿಂಟ್ ಆಗಿತ್ತು!
ಆಲೂರು ಸಿದ್ದಾಪುರಕ್ಕೆ ಇಂದು ರಾತ್ರಿಯೇ ಪಾರ್ಥಿವ ಶರೀರ ತಲುಪಲಿದ್ದು, ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪಾರ್ಥಿವ ಶರೀರ ಇರಿಸಲಾಗುತ್ತದೆ. ಬುಧವಾರ ಬೆಳಗ್ಗೆ 8:30ರ ಸುಮಾರಿಗೆ ಅಲ್ಲಿಂದ ಆಲೂರು ಸಿದ್ದಾಪುರಕ್ಕೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲಾಗುತ್ತದೆ. ನಂತರ 10:30ರ ಸುಮಾರಿಗೆ ಸಿದ್ದಾಪುರದ ಸರ್ಕಾರಿ ಶಾಲಾ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಸುಮಾರು ಎರಡೂವರೆ ಗಂಟೆಗಳ ಕಾಲ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ದರ್ಶನ ಮುಗಿಯುತ್ತಿದ್ದಂತೆ ಸೇನಾ ಗೌರವದೊಂದಿಗೆ ದಿವಿನ್ ಅವರ ತೋಟದಲ್ಲಿರುವ ತಂದೆಯ ಸಮಾಧಿ ಬಳಿಯೇ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಶ್ರೀನಗರದ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊಡಗಿನ ಯೋಧ ಹುತಾತ್ಮ!