ಮಡಿಕೇರಿ: ಇಬ್ಬರು ಪತ್ನಿಯರ ನಡುವೆ ಕಲಹ ಏರ್ಪಟ್ಟು ಮೊದಲನೆಯ ಪತ್ನಿ 2ನೇ ಪತ್ನಿಯ ಕತ್ತನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಕೊಡಗು ಜಿಲೆಯ ವಿರಾಜಪೇಟೆ ತಾಲೂಕಿನ ಅರೆಕಾಡು ಗ್ರಾಮದಲ್ಲಿ ನಡೆದಿದೆ.
ವಶಿಕಾ ದೇವಿ (27) ಕೊಲೆಯಾದ ಮಹಿಳೆ. ಮೂಲತಃ ಜಾರ್ಖಂಡ್ ರಾಜ್ಯದ ದಯಾನಂದ್ನ ಮೊದಲನೆಯ ಪತ್ನಿ ಆಶಿಕಾ ಗುಪ್ತ ಕೊಲೆ ಮಾಡಿ ಪರಾರಿಯಾಗಿದ್ದಾಳೆ.
ಏನಿದು ಪ್ರಕರಣ?
ದಯಾನಂದ್ ಕಳೆದ 7 ವರ್ಷಗಳ ಹಿಂದೆ ಆಶಿಕಾ ಗುಪ್ತಳನ್ನು ಮದುವೆಯಾಗಿದ್ದನು. ಒಂದು ವರ್ಷದ ನಂತರ ವಶಿಕಾ ದೇವಿಯನ್ನು ಪ್ರೀತಿಸಿ ವಿವಾಹವಾಗಿದ್ದಾನೆ. ಮೊದಲನೆಯ ಪತ್ನಿಗೆ ಒಂದು ಮಗು ಹಾಗೂ 2ನೇ ಪತ್ನಿಗೆ ಕೂಡ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಹೆಂಡತಿ ಮತ್ತು ಮೂರು ಮಕ್ಕಳೊಂದಿಗೆ ದಯಾನಂದ್ ಸಿದ್ದಾಪುರ ಸಮೀಪದ ಬಳಂಜಿಗೆರೆ ಖಾಸಗಿ ತೋಟದ ಲೈನ್ ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸವಾಗಿದ್ದನು.
ಮೂವರು ಜೊತೆಯಲ್ಲಿ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಕೆಲ ದಿನಗಳಿಂದ ಇಬ್ಬರು ಹೆಂಡತಿಯರ ನಡುವೆ ವೈಮನಸ್ಸು ಉಂಟಾಗಿ ಸಣ್ಣ ಪುಟ್ಟ ಮಾತಿನ ಕಲಹಗಳು ಏರ್ಪಟ್ಟಿತು ಎನ್ನಲಾಗಿದೆ. ಶನಿವಾರ ಪತಿಯೊಂದಿಗೆ ಇಬ್ಬರು ತೋಟ ಕೆಲಸಕ್ಕೆ ತೆರಳಿ ಲೈನ್ ಮನೆಗೆ ಹಿಂದಿರುಗುವಾಗ ಇಬ್ಬರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ.
ಆಗ ಆಶಿಕಾ ಗುಪ್ತ, ವಶಿಕಾ ದೇವಿಯ ಕುತ್ತಿಗೆಯನ್ನು ಕತ್ತಿಯಿಂದ ಕಡಿದು ಪರಾರಿಯಾಗಿದ್ದಾಳೆ. ತೀವ್ರ ರಕ್ತಸ್ರಾವದಿಂದ ವಶಿಕಾ ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾಳೆ. ದಯಾನಂದ್ ತೋಟದಿಂದ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಸಿದ್ದಾಪುರ ಠಾಣಾಧಿಕಾರಿ ಬೋಜಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.