-ಭಕ್ತರನ್ನ ಮನೆಗೆ ಕಳುಹಿಸಲು ಪೊಲೀಸರ ಹರಸಾಹಸ
ರಾಯಚೂರು: ಅನಾಮಿಕ ಅಜ್ಜಿಯ ಮಾತು ನಂಬಿದ ನೂರಾರು ಮಹಿಳೆಯರು ನೈವೇದ್ಯವಾಗಿ ಮೊಸರನ್ನ ತಂದಿದ್ದನ್ನು ನೋಡಿ ಪೊಲೀಸರು ಶಾಕ್ ಆಗಿದ್ದಾರೆ. ಕೊರೊನಾ ಲಾಕ್ಡೌನ್ ನಡುವೆ ದೇವಸ್ಥಾನಕ್ಕೆ ಆಗಮಿಸಿದ ಮಹಿಳೆಯರನ್ನು ಮನೆಗೆ ಕಳುಹಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ.
ಕೊರಾನಾ ವೈರಸ್ ಗೆ ಶಾಂತಿ ಆಗಬೇಕೆಂದರೆ ಮಾರೆಮ್ಮ ದೇವಿಗೆ ಮೊಸರನ್ನ ನೀಡಬೇಕಂತೆ. ಹೀಗಂತ ರಾಯಚೂರಿನಲ್ಲಿ ಅನಾಮಿಕ ಅಜ್ಜಿಯೊಬ್ಬಳು ಹೇಳಿದ ಮಾತನ್ನ ಕೇಳಿ ನೂರಾರು ಜನ ಮಹಿಳೆಯರು ನಗರದ ಕಂದಗಡ್ಡೆ ಮಾರೆಮ್ಮ ದೇವಾಲಯಕ್ಕೆ ಮೊಸರನ್ನ ನೈವೇದ್ಯ ನೀಡಿದ್ದಾರೆ. ಲಾಕ್ ಡೌನ್ ಇದ್ದರೂ ಲೆಕ್ಕಿಸದೇ ನೂರಾರು ಜನ ದೇವಾಲಯಕ್ಕೆ ಬಂದು ಮುಗಿಬಿದ್ದು ನೈವೇದ್ಯ ಕೊಟ್ಟಿದ್ದಾರೆ.
ಮೈಯಲ್ಲಿ ದೇವರು ಬಂದು ಹೇಳಿದೆ ಅಂತ ಹೇಳಿದ್ದ ಅಜ್ಜಿ ಮಾತನ್ನ ಕೇಳಿ ಜನ ನೈವೇದ್ಯ ನೀಡಲು ಬಂದಿದ್ದಾರೆ. ಕೊರೊನಾ ಗಂಭೀರತೆಯನ್ನ ಅರ್ಥಮಾಡಿಕೊಳ್ಳದೆ, ಯಾವುದೇ ಸಾಮಾಜಿಕ ಅಂತರ ಕಾಪಾಡದೆ ಜನ ಯಾವುದೋ ಅಜ್ಜಿ ಮಾತು ಕೇಳಿ ಗುಂಪುಗುಂಪಾಗಿ ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಜನ ಗುಂಪು ಸೇರುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಅಲ್ಲಿದ್ದವರನ್ನ ಚದುರಿಸಿ ಕಳುಹಿಸಿದ್ದಾರೆ.
ಇದೇ ರೀತಿ ಕೆಲವು ದಿನಗಳ ಹಿಂದೆ ಧರ್ಮಸ್ಥಳದ ನಂದಾದೀಪ ಆರಿದೆ ಎಂಬ ಸುಳ್ಳು ಸುದ್ದಿ ಹರಿದಾಡಿತ್ತು. ವಾಟ್ಸಪ್ ಗಳಲ್ಲಿ ಸುದ್ದಿ ನೋಡಿದ ಜನರು ರಾತ್ರೋರಾತ್ರಿ ಮನೆಯನ್ನು ಶುಚಿಗೊಳಿಸಿ ಮನೆಯ ಮುಂದೆ ದೀಪ ಬೆಳಗಿದ್ದರು. ನಂತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗಡೆ ಅವರು ಸ್ಪಷ್ಟನೆ ನೀಡಿ ಜನರ ಆತಂಕವನ್ನು ದೂರು ಮಾಡಿದ್ದರು.