– 50 ಸಾವಿರ ರೂ. ಬಾಂಡ್ ಹಣಕ್ಕಾಗಿ ಕುಟುಂಬಸ್ಥರ ಪರದಾಟ
ಕೊಪ್ಪಳ: ಮರಕುಂಬಿ ಪ್ರಕರಣದ (Marakumbai Case) 99 ಅಪರಾಧಿಗಳಿಗೆ ಧಾರವಾಡ ಹೈಕೋರ್ಟ್ನಿಂದ (Dharwad HighCourt) ಜಾಮೀನು ದೊರೆತಿದೆ. ಆದರೆ ಜಾಮೀನಿಗೆ ವಿಧಿಸಿರುವ ಷರತ್ತು ಪೂರೈಸಲು ಸಾಧ್ಯವಾಗದೇ ಜೈಲೇಗತಿ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಮರಕುಂಬಿ ಪ್ರಕರಣದಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬರೋಬ್ಬರಿ 101 ಆರೋಪಿಗಳಿಗೆ ಕೋರ್ಟ್ ಶಿಕ್ಷೆ ವಿಧಿಸಿತ್ತು. ಅದರಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಟ್ರಾಸಿಟಿ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದು, ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಆದರೆ ಇದೀಗ ಧಾರವಾಡ ಹೈಕೋರ್ಟ್ ಪೀಠ 99 ಅಪರಾಧಿಗಳಿಗೆ ಜಾಮೀನು ಮಂಜೂರು ಮಾಡಿದೆ. ಆದರೆ ಜಾಮೀನಿಗೆ (Bail) ವಿಧಿಸಿರುವ ಷರತ್ತು ಪೂರೈಸಲು ಸಾಧ್ಯವಾಗದೇ ಕುಟುಂಬಗಳು ಪರದಾಡುತ್ತಿವೆ. ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯ ಇಲ್ಲದಂತಾಗಿದೆ.ಇದನ್ನೂ ಓದಿ: ಇಬ್ಬರು ಸಚಿವರಿಂದಲೇ ಮುಡಾ ಅಕ್ರಮಕ್ಕೆ ಸಹಕಾರ!
ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavati) ತಾಲೂಕಿನ ಮರಕುಂಬಿ ಗ್ರಾಮದಲ್ಲಿ 2014ರ ಆ.28 ರಂದು, ದಲಿತರ ಮೇಲೆ ದೌರ್ಜನ್ಯ ನಡೆದಿತ್ತು. ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಕೊಪ್ಪಳದ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ 2024ರ ಅ.24ರಂದು ಬರೋಬ್ಬರಿ 101 ಆರೋಪಿಗಳನ್ನು ಅಪರಾಧಿಗಳು ಎಂದು ಆದೇಶ ಹೊರಡಿಸಿತ್ತು. ಜೊತೆಗೆ 98 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಕೊಪ್ಪಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜೈಲುಪಾಲಾಗಿದ್ದವರ ಕುಟುಂಬಸ್ಥರು ಧಾರವಾಡ ಹೈಕೋರ್ಟ್ಗೆ ಮೊರೆ ಹೋಗಿದ್ದರು. ಧಾರವಾಡ ಹೈಕೋರ್ಟ್ ಪೀಠ ಜೀವಾವಧಿ ಶಿಕ್ಷೆಗೊಳಗಾಗಿದ್ದ ಎ1 ಆರೋಪಿ ಮಂಜುನಾಥ ಹೊರತುಪಡಿಸಿ, ಉಳಿದೆಲ್ಲರಿಗೂ ಜಾಮೀನು ನೀಡಿ ಆದೇಶ ಹೊರಡಿಸಿದೆ. ಜಾಮೀನು ಸಿಕ್ಕಿರುವುದು ಅಪರಾಧಿಗಳ ಕುಟುಂಬಸ್ಥರ ಸಂತಸ ಇಮ್ಮಡಿಗೊಳಿಸಿದೆ. ಆದರೆ ಜಾಮೀನಿಗೆ ವಿಧಿಸಿರುವ ಷರತ್ತುಗಳು ಅನೇಕ ಕುಟುಂಬಗಳನ್ನು ಕಂಗಾಲಾಗಿಸಿದೆ.
ಈಗಾಗಲೇ ಜೈಲು ಪಾಲಾಗಿರುವ 100 ಜನರ ಪೈಕಿ, ಬಹುತೇಕರು ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವವರಾಗಿದ್ದಾರೆ. ಕೆಲ ಕುಟುಂಬಗಳಲ್ಲಿ, ಐದಾರು ಜನ ಜೈಲು ಪಾಲಾಗಿದ್ದಾರೆ. ಆದರೆ ಇದೀಗ ಪ್ರತಿಯೊಬ್ಬರು 50 ಸಾವಿರ ರೂ. ಬಾಂಡ್ ಮತ್ತು ಓರ್ವ ವ್ಯಕ್ತಿಯ ಶ್ಯೂರಿಟಿ ನೀಡಲು ಕೋರ್ಟ್ ಆದೇಶ ಹೊರಡಿಸಿದೆ. ಓರ್ವ ವ್ಯಕ್ತಿಯ ಶ್ಯೂರಿಟಿ ನೀಡಲಿಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಅನೇಕರಿಗೆ ತಲಾ 50 ಸಾವಿರ ರೂ. ಹಣ ಹೊಂದಿಸುವುದು ಕಷ್ಟವಾಗಿದೆ.
ಗ್ರಾಮದಲ್ಲಿ ಭೀಮಮ್ಮ ಎನ್ನುವ ಮಹಿಳೆಯ ಪುತ್ರ ನಾಗರಾಜ್ ಕೂಡಾ ಜೈಲಲ್ಲಿದ್ದಾನೆ. ಕೂಲಿ ಮಾಡುತ್ತಿದ್ದ ಮಗ ಜೈಲಲ್ಲಿರುವುದರಿಂದ ಮಗನ ಜಾಮೀನಿಗಾಗಿ 50 ಸಾವಿರ ರೂ. ಹೊಂದಿಸುವುದು ಹೇಗೆ ಎನ್ನುವುದನ್ನು ತಿಳಿಯದೆ ಕಂಗಾಲಾಗಿದ್ದಾರೆ. ಇಂತಹದೇ ಸ್ಥಿತಿ ಅನೇಕ ಕುಟುಂಬಗಳಲ್ಲಿ ಇದೆ. ಜಾಮೀನು ಮಂಜೂರಾಗಿರುವುದರಿಂದ ಷರತ್ತು ಪೂರೈಸಲು ಅನೇಕರು ಪ್ರಯತ್ನ ನಡೆಸಿದ್ದು, ಹಣ ಹೊಂದಿಕೆಯಾದವರು ಬಾಂಡ್ ನೀಡಿ, ತಮ್ಮವರನ್ನು ಹೊರಗಡೆ ತರಲು ಯತ್ನ ನಡೆಸಿದ್ದಾರೆ.
ಜೈಲು ಪಾಲಾಗಿದ್ದವರ ಕುಟುಂಬಸ್ಥರು, ಕಳೆದ ಇಪ್ಪತ್ತು ದಿನಗಳಿಂದ ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದರು. ಅವರೆಲ್ಲರ ಪಾಲಿಗೆ ದೀಪಾವಳಿ ಹಬ್ಬ ಕೂಡಾ ಕರಾಳ ಹಬ್ಬವಾಗಿತ್ತು. ಆದರೆ ಇದೀಗ ಜಾಮೀನು ಸಿಕ್ಕಿರುವ ಖುಷಿ ಎಲ್ಲರಲ್ಲಿದ್ದು, ಹಣ ಹೊಂದಿಸುವುದು ಹೇಗೆ ಎನ್ನುವ ಚಿಂತೆ ಮಾತ್ರ ಬಹುತೇಕರನ್ನು ಕಾಡುತ್ತಿದೆ.ಇದನ್ನೂ ಓದಿ: ಬೀದರ್ ಬರೋಬ್ಬರಿ 13,295 ಎಕರೆ ಆಸ್ತಿ ವಕ್ಫ್ ಪಾಲು!