ಉಡುಪಿ: ಕೇರಳ (Kerala) ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಶಂಕಿತ ನಕ್ಸಲ್ ನಾಯಕಿ ಶ್ರೀಮತಿ ಅಲಿಯಾಸ್ ಉಣ್ಣಿಮಾಯಾ (Maoist Leader Unnimaya) ಉರೂಫ್ ಸಂಗೀತಾಳನ್ನು ಉಡುಪಿಗೆ (Udupi) ಕರೆತರಲಾಗಿದೆ. ಹೆಬ್ರಿ ತಾಲೂಕಿನಲ್ಲಿ ನಡೆದ ಪ್ರಕರಣಗಳ ವಿಚಾರಣೆಗಾಗಿ ಕಾರ್ಕಳಕ್ಕೆ ಕರೆತಂದಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಸಿಪಿಐ ಮಾವೋಯಿಸ್ಟ್ ಪರ ಘೋಷಣೆ ಮೊಳಗಿಸಿದ್ದಾಳೆ.
ಚಿಕ್ಕಮಗಳೂರಿನ ಶೃಂಗೇರಿಯಿಂದ 2007 ರಲ್ಲಿ ತನ್ನ 17ನೇ ವಯಸ್ಸಿಗೆ ಕಣ್ಮರೆಯಾಗಿ ತಲೆಮರೆಸಿಕೊಂಡು ದಶಕಗಳ ಕಾಲ ಕಾಡಲ್ಲಿ ಓಡಾಡಿದ್ದಳು. ಬರೋಬ್ಬರಿ 16 ವರ್ಷಗಳ ನಂತರ 2023ರ ನವೆಂಬರ್ 7ರಂದು ಕೇರಳ ಪೊಲೀಸರಿಗೆ ಸೆರೆಸಿಕ್ಕಿದ್ದಳು. ಕೇರಳದಲ್ಲಿ ಸಂಗೀತಾ ಉಣ್ಣಿಮಾಯಾ ಆಗಿ ನಾಮಕರಣಗೊಂಡು ಹೋರಾಟದಲ್ಲಿ ತೊಡಗಿಸಿಕೊಂಡಿದ್ದಳು. ಹಲವಾರು ಪ್ರಕರಣಗಳಲ್ಲಿ ಕೇರಳ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಳೆ. ಇದನ್ನೂ ಓದಿ: ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ; ಪೂರ್ಣ ತೋಳಿನ ಶರ್ಟ್, ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ
ಫೆಬ್ರವರಿ 13 ರಂದು ಕಾರ್ಕಳ ನಗರ ಠಾಣೆ ಪೊಲೀಸರು ಕೇರಳ ಜೈಲಿನಿಂದ ಬಿಗಿ ಭದ್ರತೆಯಲ್ಲಿ ಕರೆತಂದಿದ್ದಾರೆ. ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆಬ್ರವರಿ 17ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ವಿಚಾರಣೆ ನಡೆಸಿ ಕೋರ್ಟ್ಗೆ ಒಪ್ಪಿಸಲಾಗಿದೆ. 2011ರ ನವೆಂಬರ್ 19ರಂದು ಹೆಬ್ರಿಯ ಕಬ್ಬಿನಾಲೆಯಲ್ಲಿ ನಡೆದ ಸದಾಶಿವ ಗೌಡ ಅವರ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಕೋರ್ಟ್ ಪ್ರೊಡ್ಯೂಸ್ ಮಾಡಲಾಯ್ತು. ಈ ಸಂದರ್ಭ ಸಿಪಿಐ ಮಾವೋಯಿಸ್ಟ್ ಜಿಂದಾಬಾದ್.. ಎಂದು ಶ್ರೀಮತಿ ಘೋಷಣೆಗಳನ್ನು ಕೂಗಿದ್ದಾಳೆ.
ಸದಾಶಿವ ಗೌಡ ಅವರನ್ನು ಶ್ರೀಮತಿಯನ್ನು ಒಳಗೊಂಡ ನಕ್ಸಲ್ ತಂಡ ಅಪಹರಿಸಿ ಗುಂಡು ಹಾರಿಸಿ ಕೊಲೆ ನಡೆಸಿತ್ತು. ಪೊಲೀಸರಿಂದ ತಲೆಮರೆಸಿಕೊಂಡಿದ್ದ ಶ್ರೀಮತಿ ಕೇರಳದಲ್ಲಿದ್ದು, ಕಳೆದ ನವೆಂಬರ್ನಲ್ಲಿ ಆಕೆಯನ್ನು ಪತ್ತೆಹಚ್ಚಿ ಕೇರಳ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ‘ಕರಿಮಣಿ ಮಾಲೀಕ ನೀನಲ್ಲ’- ಪತ್ನಿ ರೀಲ್ಸ್ನಿಂದ ಬೇಸತ್ತು ಪತಿ ಸೂಸೈಡ್
ಇದೀಗ ವಿಚಾರಣೆಗಾಗಿ ಕಾರ್ಕಳಕ್ಕೆ ಕರೆತಂದಿದ್ದು ಡಿವೈಎಸ್ಪಿ ಅರವಿಂದ್ ಎನ್. ಕಲಗುಜ್ಜಿ ಅವರ ನೇತೃತ್ವದ ತಂಡ ತೀವ್ರ ವಿಚಾರಣೆ ನಡೆಸುತ್ತಿದೆ. ಪ್ರಕರಣ ನಡೆದ ಕಬ್ಬಿನಾಲೆಗೆ ನಕ್ಸಲ್ ನಾಯಕಿ ಶ್ರೀಮತಿಯನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದಾರೆ.
2004ರ ಅವಧಿಯಲ್ಲಿ ಹೆಬ್ರಿ – ಕಾರ್ಕಳ ಭಾಗದಲ್ಲಿ ನಕ್ಸಲ್ ಚಟುವಟಿಕೆಗಳು ಜೋರಾಗಿತ್ತು. ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಗ್ರಾಮದ ಮತ್ತಾವಿನಲ್ಲಿ ಬಾಂಬ್ ಸ್ಫೋಟ ಕೂಡ ನಡೆಸಿದ್ದರು. 2005ರ ಜುಲೈ 28ರಂದು ಕಾರ್ಕಳದ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ರಾಮಚಂದ್ರ ನಾಯ್ಕ ಮತ್ತವರ ತಂಡ ನಕ್ಸಲ್ ಕೂಬಿಂಗ್ಗೆಂದು ಜೀಪಿನಲ್ಲಿ ಕೊಂಕಣರಬೆಟ್ಟಿನಿಂದ ಮುಟ್ಟುಪಾಡಿ ಕಡೆ ತೆರಳುತ್ತಿದ್ದಾಗ ಮತ್ತಾವು ಕ್ರಾಸ್ ಬಳಿ ನಕ್ಸಲರು ಇರಿಸಿದ್ದ ನೆಲಬಾಂಬ್ ಸ್ಫೋಟಿಸಿ ರಾಮಚಂದ್ರ ನಾಯ್ಕ ಹಾಗೂ 14 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಎರಡು ಜೀಪುಗಳು ನೆಲಬಾಂಬ್ ಸ್ಫೋಟಕ್ಕೆ ಹಾನಿಗೊಂಡಿದ್ದವು. ಇದನ್ನೂ ಓದಿ: ಕೆಇಎ: ಸ್ಯಾಟ್ಸ್ ಮಾಹಿತಿ ತಿದ್ದುಪಡಿಗೆ ಅವಕಾಶ
2011ರಲ್ಲಿ ಕಬ್ಬಿನಾಲೆಯಲ್ಲಿ ಸದಾಶಿವ ಗೌಡ ಅವರನ್ನು ಅಪಹರಿಸಿ ನಕ್ಸಲ್ ತಂಡ ಕೊಲೆ ಮಾಡಿತ್ತು. ನಂತರ 2016ರಲ್ಲಿ ನೂರಾಲ್ಬೆಟ್ಟು ಶಾಲಾ ಪರಿಸರದಲ್ಲಿ ಚುನಾವಣಾ ಬಹಿಷ್ಕಾರ ಮಾಡುತ್ತೇವೆ ಎಂಬ ಬ್ಯಾನರ್ಗಳನ್ನು ನಕ್ಸಲ್ ತಂಡ ಅಳವಡಿಸಿತ್ತು. ಹೀಗೆ 2004 ರಿಂದ 2016ರವರೆಗೆ ನಕ್ಸಲ್ ಚಟುವಟಿಕೆಗಳು ಸಕ್ರಿಯವಾಗಿತ್ತು. ಉಡುಪಿ ಜಿಲ್ಲೆಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳ ವಿಚಾರಣೆ ಒಂದೊಂದಾಗಿ ನಡೆಯಲಿದೆ. ಕರ್ನಾಟಕದಲ್ಲಿ ಒಟ್ಟು 13 ಮತ್ತು ಕೇರಳದಲ್ಲಿ 30 ಪ್ರಕರಣಗಳಿದ್ದು ಎಲ್ಲವೂ ವಿಚಾರಣೆ ಹಂತದಲ್ಲಿದೆ.