ಬಾಲಿವುಡ್ ಖ್ಯಾತ ಸ್ಟಾರ್ ದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿಕೌಶಲ್ ಅವರಿಗೆ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ ಘಟನೆ ಬಾಲಿವುಡ್ ನಲ್ಲಿ ಆತಂಕ ಮೂಡಿಸಿತ್ತು. ಈ ಕುರಿತು ಅವರು ಮುಂಬೈ ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದರು. ದೂರು ನೀಡಿದ ಕೆಲವೇ ಗಂಟೆಗಳಲ್ಲೇ ಪೊಲೀಸರು ಮನ್ವಿಂದರ್ ಹೆಸರಿನ ವ್ಯಕ್ತಿಯನ್ನು ಬಂಧಿಸಿದ್ದು, ಆತನನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಆತ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಮನ್ವಿಂದರ್ ಕೂಡ ಬಾಲಿವುಡ್ ಕಲಾವಿದ. ಸಹ ನಟನಾಗಿ ಹಲವಾರು ಸಿನಿಮಾಗಳನ್ನು ಮಾಡಿದ್ದಾನಂತೆ. ಜೊತೆಗೆ ಕತ್ರಿಕಾ ಕೈಫ್ ಅವರ ಅಪ್ಪಟ ಅಭಿಮಾನಿ. ಅಲ್ಲದೇ, ಕತ್ರಿನಾ ಕೈಫ್ ಅವರನ್ನು ಮದುವೆ ಆಗಬೇಕು ಎಂದು ಕನಸು ಕೂಡ ಕಂಡಿದ್ದನಂತೆ. ಅಷ್ಟರಲ್ಲಿ ವಿಕ್ಕಿ ಜೊತೆ ಕತ್ರಿನಾ ಹೊಸ ಜೀವನಕ್ಕೆ ಕಾಲಿಟ್ಟರು. ಈ ನೋವನ್ನು ತಡೆದುಕೊಳ್ಳಲು ಆಗದೇ ಮನ್ವಿಂದರ್ ಕೊಲೆ ಬೆದರಿಕೆ ಹಾಕಿದ್ದಾನಂತೆ. ಹಾಗಂತ ಪೊಲೀಸರ ಮುಂದೆ ಸ್ವತಃ ಆತನೇ ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿ:10 ಪರ್ಸೆಂಟ್ ಕೂಡ ನೆಮ್ಮದಿ ಇಲ್ಲಾ ಎಂದ ತಲೈವಾ: ಮಗಳ ಡಿವೋರ್ಸ್ ವಿಚಾರದಲ್ಲಿ ಕುಗ್ಗಿದ್ರಾ ರಜನಿಕಾಂತ್
ಗಾಯಕ ಸಿಧು ಮೂಸೆವಾಲಾ ಸಾವಿನ ನಂತರ ಬಾಲಿವುಡ್ ನ ಅನೇಕ ಕಲಾವಿದರಿಗೆ ಬೆದರಿಕೆ ಕರೆಗಳು ಬರುತ್ತಿವೆ. ನಾನಾ ಕಾರಣಗಳಿಂದಾಗಿ ಅನೇಕರು ಈ ರೀತಿಯ ಕೊಲೆ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ, ರಕ್ಷಣೆಗಾಗಿ ಪೊಲೀಸರ ಮೊರೆ ಕೂಡ ಹೋಗಿದ್ದಾರೆ. ಸಲ್ಮಾನ್ ಖಾನ್, ವಿವೇಕ ಅಗ್ನಿಹೋತ್ರಿ, ಕಂಗನಾ ರಣಾವತ್ ಸೇರಿದಂತೆ ಹಲವು ಕಲಾವಿದರಿಗೆ ಈಗಾಗಲೇ ಜೀವ ಬೆದರಿಕೆ ಹಾಕಲಾಗಿದೆ. ಅವರು ಕೂಡ ದೂರು ದಾಖಲಿಸಿದ್ದಾರೆ.