ರಾಯಚೂರು: ಮಂತ್ರಾಲಯದಲ್ಲಿ ಗುರು ವೈಭವೋತ್ಸವ ಸಂಭ್ರಮ ಮನೆ ಮಾಡಿದೆ. ಇಂದು ರಾಯರ 401ನೇ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತಿದ್ದು, ಬೆಳಗ್ಗೆಯಿಂದಲೇ ಶ್ರೀ ಮಠದಲ್ಲಿ ವಿಶೇಷ ಪೂಜೆಗಳು ಆರಂಭಗೊಂಡಿವೆ. ರಾಯರ ಪಾದುಕೆಗಳಿಗೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಿಶೇಷ ಪೂಜೆ ನೆರವೇರಿಸಿದರು.
ಶ್ರೀ ಮಠದ ಪ್ರಾಂಗಣದಲ್ಲಿ ಪ್ರಹ್ಲಾದ್ ರಾಜರಿಗೆ ಮುತ್ತು, ರನ್ನ ಮತ್ತು ಕನಕಗಳಿಂದ ಅಭಿಷೇಕ ಮಾಡಿದರು. ಗುರು ವೈಭವೋತ್ಸವ ಹಿನ್ನೆಲೆ ಮಂತ್ರಾಲಯ ಮಠದ ಪ್ರಾಂಗಣದಲ್ಲಿ ಸ್ವರ್ಣ ರಥೋತ್ಸವ ಜರುಗಿತು. ರಾಯರ ಪಾದುಕೆಗಳನ್ನು ರಥದಲ್ಲಿಟ್ಟು ಕೋಲಾಟ, ಭಜನೆಯ ಮೆರಗಿನೊಂದಿಗೆ ನಡೆದ ಸ್ವರ್ಣ ರಥೋತ್ಸವ ನಡೆಯಿತು. ರಾಯರ ಪಟ್ಟಾಭಿಷೇಕ ಸಂಭ್ರಮಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.
ಈ ವರ್ಷದ ಗುರು ವೈಭವೋತ್ಸವ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ಭಾಗವಹಿಸಿದ್ದು ವಿಶೇಷವಾಗಿತ್ತು. ಇನ್ನೂ ಐದು ದಿನಗಳ ಕಾಲ ಗುರು ವೈಭವೋತ್ಸವ ನಡೆಯಲಿದ್ದು, ಮಾರ್ಚ್ 9 ರಂದು ರಾಯರ 427 ನೇ ವರ್ಧಂತಿ ಉತ್ಸವ ಜರುಗಲಿದೆ. ಈ ಸಂಭ್ರಮದಲ್ಲಿ ಭಾಗವಹಿಸಲು ಭಕ್ತರ ದಂಡು ಮಂತ್ರಾಲಯಕ್ಕೆ ಹರಿದು ಬರುತ್ತಿದೆ.