ನವದೆಹಲಿ: ದೆಹಲಿಯ ಅಬಕಾರಿ ನೀತಿ (Delhi Liquor Policy Case) ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರನ್ನು CBI ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ. ಸೋಮವಾರ ಬೆಳಗ್ಗೆ ಸಿಸೋಡಿಯಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ದೆಹಲಿಯ ಹಣಕಾಸು, ಅಬಕಾರಿ ಮತ್ತು ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಭಾನುವಾರ ಬೆಳಗ್ಗೆಯಿಂದ ವಿಚಾರಣೆ ನಡೆಸಿದ್ದರು. ಒಂಭತ್ತು ಗಂಟೆಗಳ ನಂತರ ಬಂಧನವಾಗಿದೆ. ಸತ್ಯೇಂದ್ರ ಜೈನ್ ನಂತರ ಬಂಧನಕ್ಕೊಳಗಾದ ಎರಡನೇ ದೆಹಲಿ ಸಚಿವ ಸಿಸೋಡಿಯಾ ಆಗಿದ್ದಾರೆ. ಇದನ್ನೂ ಓದಿ: ಕೆಲ ತಿಂಗಳು ಜೈಲಲ್ಲಿದ್ರೂ I Don’t Care- ವಿಚಾರಣೆಗೆ ಸಿಬಿಐ ಕಚೇರಿ ತಲುಪಿದ ಸಿಸೋಡಿಯಾ
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಸಿಸೋಡಿಯಾ ಅವರ ಮನೆ ಮತ್ತು ಸಿಬಿಐ ಕಚೇರಿಯ ಹೊರಗೆ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ.
ಸಿಸೋಡಿಯಾ ಬಂಧನಕ್ಕೆ ಆಮ್ ಆದ್ಮಿ ಪಕ್ಷದಿಂದ (AAP) ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮನೀಶ್ ಸಿಸೋಡಿಯಾ ಭ್ರಷ್ಟ ಎಂದು ಬಿಜೆಪಿ ಹೇಳುತ್ತಿದೆ. ಆದರೆ ನೀವು ಅವರ ಮನೆ ಅಥವಾ ಬ್ಯಾಂಕ್ ಖಾತೆಗಳಿಂದ ಏನನ್ನೂ ಪಡೆದಿಲ್ಲ. ಅವರ ವಿರುದ್ಧದ ಯಾವುದೇ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಅವರ ಬಂಧನವು ಎಎಪಿ ಮತ್ತು ಕೇಜ್ರಿವಾಲ್ ಅವರ ಜನಪ್ರಿಯತೆಯ ಮೇಲೆ ದಾಳಿ ಮಾಡುವ ಉದ್ದೇಶದಿಂದ ಕೂಡಿದೆ ಎಂದು ಆಮ್ ಆದ್ಮಿ ಪಕ್ಷದ ಅತಿಶಿ ಆರೋಪಿಸಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಆಯ್ತು.. ಈಗ ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆಗೆ ಕಾಂಗ್ರೆಸ್ ಪ್ಲಾನ್
ಅಬಕಾರಿ ನೀತಿ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಕಳೆದ ವರ್ಷ ಅಕ್ಟೋಬರ್ 17 ರಂದು ವಿಚಾರಣೆ ನಡೆಸಲಾಗಿತ್ತು. ಅಷ್ಟೇ ಅಲ್ಲದೇ ಅವರ ಮನೆ ಮತ್ತು ಬ್ಯಾಂಕ್ ಲಾಕರ್ಗಳನ್ನೂ ಶೋಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್ಶೀಟ್ ಸಲ್ಲಿಸಿದ ಸುಮಾರು 3 ತಿಂಗಳ ಬಳಿಕ ಸಿಬಿಐ ಅಧಿಕಾರಿಗಳು ಸಿಸೋಡಿಯಾ ಅವರನ್ನು ಇಂದು ಬಂಧಿಸಿದ್ದಾರೆ.