ಮಣಿಪುರ ಶೀಘ್ರದಲ್ಲೇ ಶಾಂತಿಯ ಬೆಳಕನ್ನು ಕಾಣಲಿದೆ: ಮೋದಿ ಭರವಸೆ

Public TV
2 Min Read
narendra modi lok sabha

ನವದೆಹಲಿ: ಮಣಿಪುರ (Manipur) ಶೀಘ್ರದಲ್ಲೇ ಮತ್ತೊಮ್ಮೆ ಶಾಂತಿಯ ಬೆಳಕನ್ನು ಕಾಣಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಭರವಸೆ ನೀಡಿದ್ದಾರೆ.

ಲೋಕಸಭೆಯಲ್ಲಿ (Lok Sabha) ಗುರುವಾರ ತಮ್ಮ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಕುರಿತು ಭಾಷಣ ಮಾಡುವಾಗ, ಸಂಘರ್ಷ ಪೀಡಿತ ಮಣಿಪುರದ ಜನತೆಗೆ ರಾಜ್ಯದಲ್ಲಿ ಶಾಂತಿ ಸ್ಥಾಪನೆಯ ಭರವಸೆ ನೀಡಿದ್ದಾರೆ. ದೇಶ ಮತ್ತು ಸಂಸತ್ತು ನಿಮ್ಮೊಂದಿಗಿದೆ ಎಂದು ಮಣಿಪುರದ ತಾಯಂದಿರು ಮತ್ತು ಸಹೋದರಿಯರಿಗೆ ನಾನು ಹೇಳಲು ಬಯಸುತ್ತೇನೆ. ಮಣಿಪುರವನ್ನು ಅಭಿವೃದ್ಧಿಪಡಿಸಲು ನಾವು ಕೆಲಸ ಮಾಡುತ್ತೇವೆ ಎಂದು ನಾನು ಮಣಿಪುರದ ಜನರಿಗೆ ಭರವಸೆ ನೀಡಲು ಬಯಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಲೋಕಸಭೆಯಲ್ಲಿ ಮೋದಿ ಭಾಷಣದ ಮಧ್ಯೆ ಸಭಾತ್ಯಾಗ ಮಾಡಿದ ವಿಪಕ್ಷಗಳ ಸಂಸದರು

Manipur 4

ಮಣಿಪುರದಲ್ಲಿ ಹಿಂಸೆ ಶುರುವಾಗಿದೆ. ಬಹಳಷ್ಟು ಜನರು ತಮ್ಮವರನ್ನು ಕಳೆದುಕೊಂಡಿದ್ದಾರೆ. ಮಹಿಳೆಯರ ಜೊತೆಗೆ ಕೆಟ್ಟದಾಗಿ ನಡೆದುಕೊಳ್ಳಲಾಗಿದೆ. ತಪ್ಪಿತಸ್ಥರನ್ನು ಶಿಕ್ಷಿಸುವ ಕೆಲಸ ಸರ್ಕಾರ ಮಾಡಲಿದೆ. ಮಾತುಕತೆ ನಡೆಯುತ್ತಿದೆ, ಶಾಂತಿ ಮರುಕಳಿಸಲಿದೆ. ಮಣಿಪುರ ಜನರಲ್ಲೂ ಮನವಿ ಮಾಡುತ್ತೇನೆ. ದೇಶ ನಿಮ್ಮ ಜೊತೆಗೆ ಇದೆ. ಸದನ ನಿಮ್ಮ ಜೊತೆಗಿದೆ. ಎಲ್ಲರೂ ಸೇರಿ ಸಮಸ್ಯೆಗೆ ಪರಿಹಾರ ಕಂಡುಕೊಕೊಳ್ಳೋಣ ಎಂದು ತಿಳಿಸಿದ್ದಾರೆ.

ಮಣಿಪುರ ಸಮಸ್ಯೆಯ ಜನಕ ಕಾಂಗ್ರೆಸ್. ಕಾಂಗ್ರೆಸ್ ರಾಜಕಾರಣ ಈ ಸಮಸ್ಯೆಗೆ ಕಾರಣ. ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದಕರ ಇಚ್ಛೆಯಂತೆ ಆಡಳಿತ ನಡೆಯುತ್ತಿತ್ತು. ಫೈಲ್‌ಗಳ ಮೇಲೆ ಗಾಂಧಿ ಫೋಟೋ ಹಚ್ಚಲು ಬಿಡದ ಸಂದರ್ಭದಲ್ಲಿ ಅಧಿಕಾರ ಯಾರು ಮಾಡುತ್ತಿದ್ದರು? ರಾಷ್ಟ್ರಗೀತೆ ಹಾಡಲು ಬಿಡದ ನಿರ್ಣಯ ಮಾಡಿದ ವೇಳೆ ಸರ್ಕಾರ ಕಾಂಗ್ರೆಸ್‌ನದ್ದಿತ್ತು. ಮಂದಿರದ ಗಂಟೆ ಸಂಜೆ ಐದು ಗಂಟೆಗೆ ಬಂದ್ ಆಗ್ತಿತ್ತು. ಆಗ ಅಧಿಕಾರ ಯಾರದಿತ್ತು? ಇಂಫಾಲ್‌ನ ಇಸ್ಕಾನ್ ಮೇಲೆ ಬಾಂಬ್ ದಾಳಿಯಾದಾಗ ಅಧಿಕಾರ ಯಾರದಿತ್ತು? ಐಎಎಸ್, ಐಪಿಎಸ್ ಅಧಿಕಾರಿಗಳ ಸಂಬಳದ ಒಂದು ಭಾಗ ಭಯೋತ್ಪಾದಕರಿಗೆ ನೀಡಬೇಕಿತ್ತು. ಆಗ ಸರ್ಕಾರ ಯಾರದಿತ್ತು? ಈ ಎಲ್ಲ ಅವಧಿಯಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿತ್ತು ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ವಿಪಕ್ಷಗಳ ನೋ ಬಾಲ್‌ಗೆ ನಮ್ಮವರಿಂದ ಸಿಕ್ಸರ್‌, ಬೌಂಡರಿ, ಕೊನೆಗೆ ಸೆಂಚುರಿ: ನರೇಂದ್ರ ಮೋದಿ

narendra Modi

ಮಣಿಪುರ ಸರ್ಕಾರ ಕಳೆದ ಆರು ವರ್ಷದಿಂದ ಸಮಸ್ಯೆ ಇತ್ಯರ್ಥ ಪಡಿಸುವ ಪ್ರಯತ್ನ ಮಾಡುತ್ತಿದೆ. ಶಾಂತಿ ಸ್ಥಾಪನೆಗೆ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದೆ. ರಾಜಕಾರಣ ದೂರವಿದ್ದಷ್ಟು ಅಲ್ಲಿ ಶಾಂತಿ‌ ನೆಲಸಲಿದೆ. ಈಶಾನ್ಯ ಭಾರತ ವಿಶ್ವದ ಪ್ರಮುಖ ಕೇಂದ್ರ ಪ್ರದೇಶವಾಗಲಿದೆ. ಇದಕ್ಕಾಗಿ ನಾನು ಅಭಿವೃದ್ಧಿ ಮಾಡುತ್ತಿದ್ದೇನೆ. ನಾನು ಬೋರ್ಡ್‌ನ ಹೆಸರಿಗಾಗಿ ಅಭಿವೃದ್ಧಿ ಮಾಡುತ್ತಿಲ್ಲ. ನಮ್ಮ ಸರ್ಕಾರ ಈಶಾನ್ಯ ಭಾರತದ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ರೈಲ್ವೆ, ಹೆದ್ದಾರಿ, ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಮಣಿಪುರಕ್ಕಿಂತ ದೊಡ್ಡ ಸಮಸ್ಯೆಗಳು ದೇಶದಲ್ಲಿ ಬಂದಿವೆ. ಅವುಗಳನ್ನು ಒಂದಾಗಿ ಸರಿಪಡಿಸುವ ಕೆಲಸ ಮಾಡಿ. ರಾಜಕಾರಣಕ್ಕಾಗಿ ಮಣಿಪುರದ ಭೂಮಿಯನ್ನು ಬಳಸಬೇಡಿ ಎಂದು ವಿಪಕ್ಷಗಳಿಗೆ ಟಾಂಗ್‌ ಕೊಟ್ಟಿದ್ದಾರೆ.

Web Stories

Share This Article