ಹಿಂಸಾಚಾರ ಸಾವಿನ ಸಂಖ್ಯೆ 54ಕ್ಕೆ ಏರಿಕೆ – ಸಹಜ ಸ್ಥಿತಿಯತ್ತ ಮಣಿಪುರ

Public TV
2 Min Read
Manipur Violence 3

ಇಂಪಾಲ: ಮಣಿಪುರದಲ್ಲಿ (Manipur) ಹಿಂಸಾಚಾರದ ಪರಿಣಾಮ ಸಾವಿನ ಸಂಖ್ಯೆ 54ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಅಂಗಡಿಗಳು ಹಾಗೂ ಮಾರುಕಟ್ಟೆಗಳು ತೆರೆಯಲ್ಪಟ್ಟಿದ್ದು ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ವಾಹನಗಳ ಸಂಚಾರ ಪ್ರಾರಂಭಗೊಂಡಿದೆ. ಆದರೂ ಹೆಚ್ಚಿನ ಸೇನಾ ಪಡೆಗಳು, ಪೊಲೀಸ್ ಪಡೆಗಳು ಭದ್ರತೆಯ ದೃಷ್ಠಿಯಿಂದ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸೇನಾ ವಾಹನದ ಮೇಲೆ ದಾಳಿ – ಓರ್ವ ಉಗ್ರನ ಹತ್ಯೆ

54 ಮೃತರಲ್ಲಿ 16 ಶವಗಳನ್ನು ಚುರಾಚಂದ್‍ಪುರ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. 15 ಮೃತದೇಹಗಳನ್ನು ಇಂಪಾಲ (Imphal) ಪೂರ್ವ ಜಿಲ್ಲೆಯ ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (Jawaharlal Nehru Institute of Medical Sciences) ಇರಿಸಲಾಗಿದೆ. ಇಂಪಾಲ ಪಶ್ಚಿಮ ಜಿಲ್ಲೆಯ ಲ್ಯಾಂಫೆಲ್‍ನಲ್ಲಿರುವ ರೀಜನಲ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ 23 ಮಂದಿ ಶವ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Manipur Violence 1

ಚುರಾಚಂದ್‍ಪುರ, ಮೋರೆ, ಕಾಕ್ಚಿಂಗ್ ಮತ್ತು ಕಾಂಗ್‍ಪೊಕ್ಪಿ ಜಿಲ್ಲೆಗಳನ್ನು ಸೇನೆಯು ನಿಯಂತ್ರಣಕ್ಕೆ ತಂದಿದ್ದರಿಂದ ಒಟ್ಟು 13,000 ಜನರನ್ನು ರಕ್ಷಿಸಲಾಗಿದೆ. ಅವರನ್ನು ಸುರಕ್ಷಿತ ಆಶ್ರಯಕ್ಕೆ ಸ್ಥಳಾಂತರಿಸಲಾಗಿದೆ. ಗುಂಡೇಟು ತಗುಲಿದ ಅನೇಕ ಜನರು ರಿಮ್ಸ್ ಮತ್ತು ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಹಿಂಸಾಚಾರದ ನಡುವೆ, ಶುಕ್ರವಾರ ರಾತ್ರಿ ಚುರಾಚಂದ್‍ಪುರ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಎನ್‍ಕೌಂಟರ್‌ನಲ್ಲಿ ಐವರು ಉಗ್ರರು ಹತರಾಗಿದ್ದಾರೆ. ಇಬ್ಬರು ಇಂಡಿಯಾ ರಿಸರ್ವ್ ಬೆಟಾಲಿಯನ್ ಜವಾನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Manipur Violence 2

ಇಂಪಾಲ ಕಣಿವೆಯಲ್ಲಿ ವಾಸಿಸುವ ಮೇಟಿ (Meitei community) ಮತ್ತು ಬೆಟ್ಟದ ಜಿಲ್ಲೆಗಳ ನಿವಾಸಿಗಳಾದ ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗದವರ ನಡುವೆ ಬುಧವಾರದಿಂದ ಘರ್ಷಣೆ ನಡೆಯುತ್ತಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಸೇನೆಯ ಹಾಗೂ ಅಸ್ಸಾಂ ರೈಫಲ್ಸ್‍ನ ಸುಮಾರು 10,000 ಸೈನಿಕರನ್ನು ನಿಯೋಜಿಸಲಾಗಿದೆ. 1,000 ಕೇಂದ್ರೀಯ ಅರೆಸೈನಿಕ ಸಿಬ್ಬಂದಿ ನಿಯೋಜಿಸಲಾಗಿದೆ. ಗಲಭೆಯನ್ನು ನಿಯಂತ್ರಿಸಲು ರೈಲುಗಳನ್ನು ರದ್ದುಗೊಳಿಸಲಾಗಿದೆ ರೈಲ್ವೆ (Railway) ಇಲಾಖೆ ತಿಳಿಸಿದೆ.

ಮೇಟಿ ಸಮುದಾಯ ಎಸ್‍ಟಿ ಸ್ಥಾನಮಾನದ ಬೇಡಿಕೆಯ ಕುರಿತು ನಾಲ್ಕು ವಾರಗಳಲ್ಲಿ ಕೇಂದ್ರಕ್ಕೆ ಶಿಫಾರಸನ್ನು ಕಳುಹಿಸುವಂತೆ ಮಣಿಪುರ ಹೈಕೋರ್ಟ್ (High Court) ಕಳೆದ ತಿಂಗಳು ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ನಂತರ ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಬುಡಕಟ್ಟು ಜನಾಂಗದವರು ಮೆರವಣಿಗೆಯನ್ನು ಆಯೋಜಿಸಿದ್ದರು. ಟೊಬರ್ಂಗ್‍ನಲ್ಲಿ ನಡೆದ ಮೆರವಣಿಗೆಯಲ್ಲಿ ಶಸ್ತ್ರಸಜ್ಜಿತ ಜನಸಮೂಹವು ಮೇಟಿ ಸಮುದಾಯದ ಜನರ ಮೇಲೆ ದಾಳಿ ಮಾಡಿದೆ. ಇದು ಕಣಿವೆ ಜಿಲ್ಲೆಗಳಲ್ಲಿ ಹಿಂಸಾಚಾರಕ್ಕೆ ಕಾರಣವಾಯಿತು. ಇದು ರಾಜ್ಯದಾದ್ಯಂತ ವ್ಯಾಪಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮತ್ತು ಉನ್ನತ ಅಧಿಕಾರಿಗಳೊಂದಿಗೆ ಮಣಿಪುರದ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಖರ್ಗೆ ಹತ್ಯೆಗೆ ಬಿಜೆಪಿ ಅಭ್ಯರ್ಥಿಯಿಂದ ಸಂಚು: ಕಾಂಗ್ರೆಸ್‌ ಆಡಿಯೋ ಬಾಂಬ್‌

Share This Article