ಇಂಫಾಲ್: 2011ರ ರಸ್ತೆ ಗಲಾಟೆ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪುರ ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ಅವರ ಮಗ ಅಜಯ್ ಮೀಟಾಯ್ಗೆ ಇಲ್ಲಿನ ಕೋರ್ಟ್ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
2011ರ ಮಾರ್ಚ್ 20ರಂದು ಅಜಯ್ ಮೀಟಯ್ ಹಾಗೂ ಇರೋಮ್ ರೋಜರ್ ಎಂಬವರ ಮಧ್ಯೆ ರಸ್ತೆ ಗಲಾಟೆ ನಡೆದಿತ್ತು. ತನ್ನ ಎಸ್ಯುವಿ ಕಾರಿನಿಂದ ಓವರ್ಟೇಕ್ ಮಾಡಲು ಬಿಡಲಿಲ್ಲವೆಂಬ ಕಾರಣಕ್ಕೆ ಅಜಯ್ ರೋಜರ್ರನ್ನು ಗುಂಡಿಟ್ಟು ಕೊಲೆ ಮಾಡಿದ್ದ.
ಇರೋಮ್ ರೋಜರ್ ತಾಯಿ ಚಿತ್ರ ದೇವಿ ಸಲ್ಲಿಸಿದ್ದ ಅರ್ಜಿಯ ಅನ್ವಯ ಕಳೆದ ವಾರ ಜಸ್ಟಿಸ್ ಎಲ್ ನಾಗೇಶ್ವರ ರಾವ್ ಹಾಗೂ ನವೀನ್ ಸಿನ್ಹಾ ನೇತೃತ್ವದ ಪೀಠ ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ಮಣಿಪುರ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿತ್ತು.
ಇರೋಮ್ ರೋಜರ್ ಪೋಷಕರು ನಾವೀಗ ಪ್ರಾಣಭಯದಲ್ಲಿದ್ದೇವೆ ಎಂದು ವಕೀಲರಾದ ಉತ್ಸವ್ ಬೇನ್ ಮೂಲಕ ಸುಪ್ರಿಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದೀಗ ಕೋರ್ಟ್ ಅಜಯ್ಗೆ 5 ವರ್ಷಗಳ ಶಿಕ್ಷೆ ವಿಧಿಸಿದ್ದು, ರೋಜರ್ ಕುಟುಂಬಕ್ಕೆ ರಕ್ಷಣೆ ಒದಗಿಸಲು ಇರುವ ಅವಕಾಶಗಳ ಬಗ್ಗೆ ವಿಚಾರ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಕೇಳಿರುವುದಾಗಿ ವರದಿಯಾಗಿದೆ.