ಮಂಗಳೂರು: ವಿವಾದಿತ ಮಂಗಳೂರಿನ (Mangaluru) ಮಳಲಿ ಮಸೀದಿ (Malali Mosque) ವಿಚಾರದಲ್ಲಿ ವಿಹೆಚ್ಪಿಗೆ ಆರಂಭಿಕ ಮುನ್ನಡೆ ಸಿಕ್ಕಿದೆ. ಮಸೀದಿಯ ಸರ್ವೇ ನಡೆಸಲು ವಿಹೆಚ್ಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಬಹುದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಅರ್ಜಿ ವಿಚಾರಣೆ ನಡೆಸಬಾರದೆಂಬ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.
ಜ್ಞಾನವಾಪಿ ಮಸೀದಿಯ (Gyanvapi Masjid) ವಿವಾದ ಆರಂಭವಾದ ಸಂದರ್ಭದಲ್ಲೇ ಮಂಗಳೂರಿನ ಮಳಲಿ ಮಸೀದಿ ವಿವಾದ ಆರಂಭಗೊಂಡಿತ್ತು. 2022ರ ಏಪ್ರಿಲ್ 21 ರಂದು ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿಯ ನವೀಕರಣಕ್ಕಾಗಿ ಒಂದು ಭಾಗವನ್ನು ಕೆಡವಿದಾಗ ಹಿಂದೂ ದೇವಸ್ಥಾನದ ಮಾದರಿ ಪತ್ತೆಯಾಗಿತ್ತು. ಹೀಗಾಗಿ ವಿಶ್ವ ಹಿಂದೂ ಪರಿಷತ್ (VHP) ಕಾಮಗಾರಿ ನಿಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಕಾಮಗಾರಿ ಸ್ಥಗಿತಗೊಂಡಿತ್ತು.
ವಿಹೆಚ್ಪಿ ತಾಂಬೂಲ ಪ್ರಶ್ನೆ ಇಟ್ಟಿದ್ದು ಅದರಲ್ಲಿ ಮಸೀದಿ ಇರೋ ಜಾಗದಲ್ಲಿ ಹಿಂದೂ ದೇವಸ್ಥಾನ ಇತ್ತು ಅನ್ನೋದು ಪ್ರಶ್ನಾ ಚಿಂತನೆಯಲ್ಲಿ ಬೆಳಕಿಗೆ ಬಂದಿತ್ತು. ಹೀಗಾಗಿ ಮಸೀದಿ ಇರೋ ಜಾಗದಲ್ಲಿ ಸರ್ವೇ ನಡೆಸಬೇಕೆಂದು ವಿಹೆಚ್ಪಿ ಮಂಗಳೂರಿನ ಮೂರನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ಸರ್ವೇ ನಡೆಸುವ ಅರ್ಜಿಗೆ ತಡೆ ನೀಡಬೇಕೆಂದು ಮಸೀದಿ ಆಡಳಿತ ಮಂಡಳಿಯೂ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ತೀರ್ಪು ನೀಡಿದ್ದು, ಸರ್ವೇ ನಡೆಸುವ ಅರ್ಜಿಯ ವಿಚಾರಣೆಯನ್ನು ಇದೇ ಡಿಸೆಂಬರ್ 8 ರಿಂದ ನಡೆಸಲು ಆದೇಶಿಸಿದೆ. ಇದನ್ನೂ ಓದಿ: ಕಾಂಗ್ರೆಸ್ನವರ ರಕ್ತದಲ್ಲಿ ಅವರ ಡಿಎನ್ಎನಲ್ಲೂ ಹಿಂದೂ ವಿರೋಧಿ ಭಾವನೆ ಇದೆ: ಆರ್.ಅಶೋಕ್
ಮಸೀದಿ ಇರೋ ಜಾಗ ವಕ್ಫ್ ಬೋರ್ಡ್ನ ಜಾಗವಾಗಿದ್ದು ಇದನ್ನು ಸಿವಿಲ್ ನ್ಯಾಯಾಲಯ ವಿಚಾರಣೆ ಮಾಡಲು ಅವಕಾಶ ಇಲ್ಲ, ವಕ್ಫ್ ಟ್ರಿಬುನಲ್ ಕೋರ್ಟ್ ಮಾಡಬೇಕೆಂದು ಮಸೀದಿ ಆಡಳಿತ ಮಂಡಳಿ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಮಂಗಳೂರಿನ ಮೂರನೇ ಹೆಚ್ಚುವರಿ ನ್ಯಾಯಾಲಯ ಮಸೀದಿ ಆಡಳಿತ ಮಂಡಳಿಯ ಅರ್ಜಿಯನ್ನು ವಜಾಗೊಳಿಸಿದ್ದು, ವಿಹೆಚ್ಪಿಯ ಅರ್ಜಿ ವಿಚಾರಣೆ ನಡೆಸಲು ಆದೇಶಿಸಿದೆ. ಹೀಗಾಗಿ ಮಸೀದಿಯ ಸರ್ವೇ ನಡೆಸಲು ವಿಹೆಚ್ಪಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ವಾದ ಆರಂಭಿಸಲು ಸೂಚಿಸಿದೆ. ಇದು ವಿಹೆಚ್ಪಿಗೆ ಸಿಕ್ಕ ಆರಂಭಿಕ ಗೆಲುವಾಗಿದ್ದು, ವಿಹೆಚ್ಪಿ ಕಾರ್ಯಕರ್ತರು ತಮ್ಮ ಕಚೇರಿ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಮಸೀದಿ ಇರೋ ಜಾಗದಲ್ಲಿ ಶಿವನ ಶಕ್ತಿ ಇದೆ ಅನ್ನೋದು ಈ ಹಿಂದೆ ತಾಂಬೂಲ ಪ್ರಶ್ನೆಯಲ್ಲಿ ತಿಳಿದು ಬಂದಿತ್ತು. ಇದೀಗ ಮಸೀದಿಯ ಒಳಗೆ ಸರ್ವೇ ನಡೆಸುವ ಅರ್ಜಿಯನ್ನೂ ನ್ಯಾಯಾಲಯ ಪುರಸ್ಕರಿಸಿ ವಿಚಾರಣೆ ಆರಂಭಿಸಲು ಆದೇಶಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರ್ವೇ ಕಾರ್ಯಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ ಅಥವಾ ಮಸೀದಿ ಆಡಳಿತ ಮಂಡಳಿ ಮತ್ತೆ ಮೇಲ್ಮನವಿ ಸಲ್ಲಿಸುತ್ತಾ ಅನ್ನೋದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಡಿಗ್ರಿ ಬಳಿಕ ಮುಂದೇನು? – ಪಬ್ಲಿಕ್ ಟಿವಿ ವಿದ್ಯಾ ಮಂದಿರಕ್ಕೆ ಬನ್ನಿ