ಮಂಗಳೂರು: ನಮ್ಮ ಸುದ್ದಿಗೆ ಬಂದರೆ, ಕೈ ಕಾಲು ಎರಡೂ ಕಟ್. ಬೇಕಾದ್ರೆ ತಲೆ ಕಡಿಯುವೆವು ಎಂದು ಮಾಜಿ ಸಚಿವ ಯು.ಟಿ ಖಾದರ್ಗೆ ಕೊಲೆ ಬೆದರಿಕೆ ಹಾಕಲಾಗಿದೆ.
ಸಿಎಎ ಸಮರ್ಥನಾ ಸಮಾವೇಶದ ವೇಳೆ ಯು.ಟಿ ಖಾದರ್ಗೆ ಕೊಲೆ ಬೆದರಿಕೆ ಹಾಕಲಾಗಿದೆ. ಸಮಾವೇಶಕ್ಕೆ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು ಖಾದರ್ಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಲಯಾಳಂ ಭಾಷೆಯಲ್ಲಿ ಖಾದರ್ ಅವರಿಗೆ ಜೀವ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೇಸರಿ ಶಾಲು ಧರಿಸಿದ್ದ ಕೆಲ ಯುವಕರ ಗುಂಪು ರಸ್ತೆ ಬದಿಯಲ್ಲಿ ನಿಂತು, ‘ನಾಯಿಯ ಮಗ ಖಾದರ್, ನಮ್ಮ ಸುದ್ದಿಗೆ ಬರಬೇಡ. ನಮ್ಮ ಸುದ್ದಿಗೆ ಬಂದರೆ, ಕೈ ಕಾಲು ಎರಡೂ ಕಟ್ ಮಾಡ್ತೇವೆ, ಬೇಕಾದ್ರೆ ತಲೆಯನ್ನೂ ಕಡಿಯುವೆವು’ ಎಂದು ಘೋಷಣೆ ಕೂಗುತ್ತಾ, ಚಪ್ಪಾಳೆ ತಟ್ಟಿ ಡ್ಯಾನ್ಸ್ ಮಾಡುತ್ತಾ ಬೆದರಿಕೆ ಹಾಕುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.
ಸುಮಾರು 56 ಸೆಕೆಂಡ್ ಇರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ಆರಂಭದಲ್ಲಿ ಜೈ, ಜೈ ಬಿಜೆಪಿ ಎಂದು ಯುವಕರು ಘೋಷಣೆ ಕೂಗಿರುವ ದೃಶ್ಯಗಳು ಕೂಡ ಇದೆ. ಹೀಗಾಗಿ ಬಿಜೆಪಿ ಕಾರ್ಯಕರ್ತರೇ ಯು.ಟಿ ಖಾದರ್ಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ.