– ಮಂಗಳೂರಿನಲ್ಲಿ ನಿಲ್ಲದ ಗಾಂಜಾ ಜಾಲ
ಮಂಗಳೂರು: ಗಾಂಜಾ ವ್ಯಸನಿಗಳು ರೆಡ್ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಘಟನೆ ಪಣಂಬೂರು ಸಮೀಪ ಬೈಕಂಪಾಡಿ ಬಳಿ ನಡೆದಿದೆ.
ಸುರತ್ಕಲ್ ಜೆ.ಎಂ ರಸ್ತೆಯ ನಿವಾಸಿ ಮೊಹಮ್ಮದ್ ರಾಜಿಕ್ (32) ಹಾಗೂ ಚೇಳ್ಯಾರು ನಿವಾಸಿ ನಿಖಿಲ್(19) ಬಂಧಿತ ಆರೋಪಿಗಳು. ರಾಜ್ಯದ ಕರಾವಳಿಯ ಗಾಂಜಾ ವಹಿವಾಟು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ಗಾಂಜಾ ಮಾರಾಟ, ಸೇವನೆ ಪ್ರಕರಣಗಳು ಹೆಚ್ಚುತ್ತಿದ್ದು, ಯುವಕರು ಈ ಚಟಕ್ಕೆ ಬೀಳುತ್ತಿದ್ದಾರೆ.
ಪೊಲೀಸರು ಅಲ್ಲೊಂದು ಇಲ್ಲೊಂದು ಪ್ರಕರಣಗಳನ್ನು ಪತ್ತೆ ಹಚ್ಚುತ್ತಾರೆ ಬಿಟ್ಟರೆ ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಇದೀಗ ಮೊಹಮ್ಮದ್ ರಾಜಿಕ್ ಹಾಗೂ ನಿಖಿಲ್ ಬೈಕಂಪಾಡಿ ಬಳಿ ಗಾಂಜಾ ಸೇವನೆ ಮಾಡುತ್ತಿದ್ದಾಗ ಮಂಗಳೂರು ಉತ್ತರ ಉಪವಿಭಾಗ ವಿಶೇಷ ಅಪರಾಧ ಪತ್ತೆದಳದ ಕೈಗೆ ಸಿಕ್ಕಿಬಿದ್ದಿದ್ದಾರೆ.
ನಗರ ಉತ್ತರ ಉಪವಿಭಾಗದ ಎಸಿಪಿ ಶ್ರೀನಿವಾಸ ಗೌಡ ನೇತೃತ್ವದ ಅಪರಾಧ ಪತ್ತೆದಳಕ್ಕೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದು, ಮುಂದಿನ ಕ್ರಮಕ್ಕಾಗಿ ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.