ಕೇವಲ 4 ಗಂಟೆ 32 ನಿಮಿಷದಲ್ಲಿ 370 ಕಿ.ಮೀ ಕ್ರಮಿಸಿ, ಹಸುಗೂಸು ಜೀವ ಉಳಿಸಿದ ಅಂಬುಲೆನ್ಸ್ ಚಾಲಕ

Public TV
2 Min Read
MNG Ambulance Drive

– ಯಶವಂತಪುರದಿಂದ ಆಸ್ಪತ್ರೆಗೆ ಹೋಗಲು 15 ನಿಮಿಷ
– ಚಾಲಕ ಹನೀಫ್‍ಗೆ ಮೈಸೂರು ಪೇಟಾ ಹಾಕಿ ಸನ್ಮಾನ

ಮಂಗಳೂರು/ ಬೆಂಗಳೂರು: ಅಂಬುಲೆನ್ಸ್ ಚಾಲಕರೊಬ್ಬರು ಕೇವಲ 4 ಗಂಟೆ 32 ನಿಮಿಷದಲ್ಲಿ 370 ಕಿ.ಮೀ ಕ್ರಮಿಸಿ ಹಸುಗೂಸು ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.

ನಲ್ವತ್ತು ದಿನಗಳ ಹಸುಗೂಸನ್ನು ಹೃದಯದ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ನಲ್ಲಿ ಅಂಬುಲೆನ್ಸ್ ನಲ್ಲಿ ರವಾನಿಸಲಾಗಿದೆ. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ಮಗುವಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಅದಕ್ಕಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿದೆ. ಚಾಲಕ ಹನೀಫ್ ಅವರು ಮಂಗಳೂರಿನಿಂದ ಆಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಗುವನ್ನು ಕೇವಲ ಆರು ಗಂಟೆಯಲ್ಲಿ ಬೆಂಗಳೂರು ತಲುಪಿಸಿದ್ದಾರೆ.

Jayadeva hospital

ಮಾರ್ಗ ಹೀಗಿತ್ತು?:
ಬೆಳ್ತಂಗಡಿ ತಾಲೂಕಿನ ಉಜಿರೆ ಮೂಲದ ಸೈಫುಲ್ ಅಜ್ಮಾನ್ ಎನ್ನುವ ಈ ಮಗುವಿಗೆ ಅಂಬುಲೆನ್ಸ್ ನಲ್ಲಿ ಹೃದಯ ಪಂಪಿಂಗ್ ವ್ಯವಸ್ಥೆ ಮಾಡಿಕೊಂಡು ಕರೆದೊಯ್ಯಲಾಯ್ತು. ಮಂಗಳೂರಿನಿಂದ, ಬಿ.ಸಿ.ರೋಡ್, ಕಲ್ಲಡ್ಕ, ಮಾಣಿ, ಉಪ್ಪಿನಂಗಡಿ, ನೆಲ್ಯಾಡಿ, ಶಿರಾಡಿ, ಸಕಲೇಶಪುರ, ಹಾಸನ, ನೆಲಮಂಗಲ ಮೂಲಕ ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ ಆಂಬುಲೆನ್ಸ್ ಬಂದಿದ್ದು ಹೆದ್ದಾರಿ ಉದ್ದಕ್ಕೂ ಜನರು ಟ್ರಾಫಿಕ್ ಸಂಚಾರ ಸುಗಮಗೊಳಿಸಿದ್ದಾರೆ. ಅಲ್ಲದೆ, ಆಯಾ ಭಾಗದ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಎಸ್ಕಾರ್ಟ್ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಂಬುಲೆನ್ಸ್ ಚಾಲಕ ಹನೀಫ್, ಮಗುವಿಗೆ ಪುನರ್ ಜನ್ಮ ಸಿಗಬೇಕು ಎನ್ನುವ ಆಸೆ ನನಗೆ ಇತ್ತು. ಮಂಗಳೂರಿನಿಂದ ಬೆಂಗಳೂರನ್ನು 5 ಗಂಟೆಯಲ್ಲಿ ತಲುಪಬಹುದು ಎಂಬ ಆಲೋಚನೆ ಹೊಂದಿದ್ದೆ. ಅದರಂತೆ 4 ಗಂಟೆ 32 ನಿಮಿಷದಲ್ಲಿ ಬೆಂಗಳೂರನ್ನು ತಲುಪಿದೆ. ಆದರೆ ಯಶವಂತಪುರದಿಂದ ನನಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಸಿಗಲಿಲ್ಲ. ಹೀಗಾಗಿ ಆಸ್ಪತ್ರೆಗೆ ತಲುಪಲು 15 ನಿಮಿಷ ಹೆಚ್ಚು ಸಮಯ ತೆಗೆದುಕೊಂಡೆ ಎಂದು ಹೇಳಿದ್ದಾರೆ.

MNG Ambulance Drive A

ಇದೇ ವೇಳೆ ಸಾರ್ವಜನಿಕರು ಚಾಲಕ ಹನೀಫ್ ಅವರಿಗೆ ಮೈಸೂರು ಪೇಟಾ ಹಾಕಿ ಸನ್ಮಾನಿಸಿದರು. ಹನೀಫ್ ಅವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಜಯದೇವ ಹೃದಯಾಲಯದ ನಿರ್ದೇಶಕ ಡಾ. ಮಂಜುನಾಥ ಮಾತನಾಡಿ, ಮಂಗಳೂರಿನಿಂದ ಬಂದಿರುವ 40 ದಿನದ ನವಜಾತ ಶಿಶುವಿಗೆ ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆ ಇತ್ತು. ಇದನ್ನು ನಾವು ವೈದ್ಯಕೀಯ ಭಾಷೆಯಲ್ಲಿ ಟಿಎಪಿವಿಸಿ ಎಂದು ಕರೆಯಲಾಗುತ್ತದೆ. ಹೃದಯದ ಎಡಭಾಗ ಶುದ್ಧ ರಕ್ತ ಹಾಗೂ ಬಲಭಾಗ ಅಶುದ್ಧ ರಕ್ತವನ್ನು ಕ್ಯಾರಿ ಮಾಡುತ್ತದೆ. ನಾಲ್ಕು ಪಲ್ಮನರಿ ವೇಯ್ನ್ (ಶ್ವಾಸಕೋಶದ ಅಭಿದಮನಿ) ಹೃದಯದ ಎಡಭಾಗಕ್ಕೆ ಕನೆಕ್ಟ್ ಆಗಬೇಕು. ಆದರೆ ಸೈಫುಲ್ ಅಝ್ಮಾನ್‍ನ ಹೃದಯದ ಬಲಭಾಗಕ್ಕೆ ಪಲ್ಮನರಿ ವೇಯ್ನ್ ಗಳು ಕನೆಕ್ಟ್ ಆಗಿವೆ. ಇದರಿಂದಾಗಿ ಮಗುವಿಗೆ ಸರಿಯಾಗಿ ಆಮ್ಲಜನಕ ಸಿಗುತ್ತಿಲ್ಲ. ಅಷ್ಟೇ ಅಲ್ಲದೆ ಮಗುವಿಗೆ ನಿಮೋನಿಯಾ ಕೂಡ ಇರುವುದರಿಂದ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.

Jayadeva hospital Manjunath

ಪ್ರತಿ ಒಂದು ಸಾವಿರ ಮಕ್ಕಳ ಪೈಕಿ 5ರಿಂದ 6 ಮಕ್ಕಳಲ್ಲಿ ಇಂತಹ ಕಾಯಿಲೆ ಕಂಡು ಬರುತ್ತದೆ. ಸಾಮಾನ್ಯವಾಗಿ ಇಂತಹ ಮಕ್ಕಳು ಒಂದು ವರ್ಷ ಮಾತ್ರ ಬದಕುಳಿಯುವ ಸಾಧ್ಯತೆ ಇದೆ. ಸೈಫುಲ್ ಅಝ್ಮಾನ್‍ಗೆ ಇರುವ ನಿಮೋನಿಯಾಗೆ ಚಿಕಿತ್ಸೆ ಕೊಡಲಾಗುತ್ತದೆ. ಬಳಿಕ ಓಪನ್ ಹಾರ್ಟ್ ಸರ್ಜರಿ ಮಾಡಲಾಗುತ್ತದೆ. ನಮ್ಮ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಇಂತಹ ಕಾಯಿಲೆ ಇರುವ 5ರಿಂದ 6 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಒಂದು ವರ್ಷಕ್ಕಿಂತ ಚಿಕ್ಕ ಮಗಳಿಗೆ ಓಪನ್ ಹಾರ್ಟ್ ಸರ್ಜರಿ ಮಾಡುವುದು ಕ್ಲಿಷ್ಟಕರ ಎಂದು ತಿಳಿಸಿದರು.

 

Share This Article
Leave a Comment

Leave a Reply

Your email address will not be published. Required fields are marked *