ಮಂಗಳೂರು: ಗುಂಡಿ ಬಿದ್ದ ರಸ್ತೆಗಳನ್ನು ನೋಡಿ ರೋಸಿ ಹೋದ ತಂಡವೊಂದು ಮಂಗಳೂರಿನಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದೆ.
ಚಂದ್ರನಲ್ಲಿ ಮಾನವ ಹೆಜ್ಜೆ ಇಟ್ಟ ರೀತಿಯಲ್ಲಿ ಬಾಲಕಿಯೊಬ್ಬಳು ರಾತ್ರಿ ಹೊತ್ತಿನಲ್ಲಿ ಮಾಡಿರುವ ಈ ಪ್ರತಿಭಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಪಡೆದಿದೆ. ಆರನೇ ತರಗತಿ ವಿದ್ಯಾರ್ಥಿನಿ ಆಡ್ಲಿನ್ ಡಿಸಿಲ್ವಳನ್ನು ಚಂದ್ರಯಾನಿಗಳ ರೀತಿಯಲ್ಲಿ ಬಟ್ಟೆ ತೊಟ್ಟು ಗುಂಡಿ ಬಿದ್ದ ರಸ್ತೆಗಳಲ್ಲಿ ಪುಟ್ಟ-ಪುಟ್ಟ ಹೆಜ್ಜೆ ಇಡುವಂತೆ ಮಾಡಲಾಗಿದೆ.
ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಹಾಳಾಗಿವೆ. ಆದರೂ ಮಹಾನಗರ ಪಾಲಿಕೆ ರಸ್ತೆ ದುರಸ್ತಿಗೆ ಮುಂದಾಗಿಲ್ಲ. ಇದನ್ನು ಪ್ರತಿಭಟಿಸಿ ಮತ್ತು ಸಾರ್ವಜನಿಕ ಜಾಗೃತಿಗಾಗಿ ಮಂಗಳೂರಿನ ಸಿವಿಕ್ ಗ್ರೂಪಿನ ಅರ್ಜುನ್ ಮಸ್ಕರೇನಸ್ ಮತ್ತು ಅಜಯ್ ಡಿಸಿಲ್ವ ಸೇರಿ ಈ ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ.
ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯ ಬಳಿಯ ಗುಂಡಿ ಬಿದ್ದ ರಸ್ತೆಗಳಲ್ಲಿ ರಾತ್ರಿ 10ರ ಸುಮಾರಿಗೆ ಚಂದ್ರಯಾನದ ಹೆಜ್ಜೆಗಳನ್ನು ಮೂಡಿಸಿ ಚಿತ್ರೀಕರಣ ಮಾಡಲಾಗಿದೆ. ಮಂಗಳೂರಿಗೆ ಬಂದ ಚಂದ್ರಯಾನಿ ಎಂಬ ತಲೆಬರಹದಡಿ ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.