ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ (Mangaluru) ಮತ್ತೆ ಪ್ರತೀಕಾರದ ಹತ್ಯೆ ನಡೆದಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಪ್ರತೀಕಾರಕ್ಕಾಗಿ ಹತ್ಯೆ ಮಾಡಿರುವುದಾಗಿ ಬಂಧಿತ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಸುಪಾರಿ ಹಂತಕರು 5 ಲಕ್ಷಕ್ಕಾಗಿ ನಡು ರಸ್ತೆಯಲ್ಲೇ ಹಿಂದೂ ಕಾರ್ಯಕರ್ತನನ್ನ (Hindu Worker) ಬರ್ಬರವಾಗಿ ಕೊಂದಿದ್ದಾರೆ. ಹಾಗಾದ್ರೆ ಸುಪಾರಿ ಕೊಟ್ಟವರು, ಹತ್ಯೆ ನಡೆದಿದ್ದು ಯಾಕೆ? ಅನ್ನೋದರ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ..
ಕಳೆದ ಮೇ 1 ರಂದು ರಾತ್ರಿ 8.30ರ ಸುಮಾರಿಗೆ ಮಂಗಳೂರು ಹೊರವಲಯದ ಬಜಪೆ ಕಿನ್ನಿಪದವು ಎಂಬಲ್ಲಿ ನಡು ರಸ್ತೆಯಲ್ಲೇ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು (Suhas Shetty) ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ 7 ಮಂದಿ ಹಾಗೂ ಸುಪಾರಿ ಕೊಟ್ಟ ಓರ್ವ ಸೇರಿ ಒಟ್ಟು 8 ಮಂದಿಯನ್ನ ಮಂಗಳೂರು ಪೊಲೀಸರು (Mangaluru Police) ಬಂಧಿಸಿದ್ದಾರೆ. ಇದು ಪ್ರತೀಕಾರಕ್ಕೆ ನಡೆದ ಹತ್ಯೆ ಅನ್ನೋದು ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದೆ. ಇದನ್ನೂ ಓದಿ: ಸುಹಾಸ್ ಹತ್ಯೆ ಕೇಸ್ – ಫಾಝಿಲ್ ಸಹೋದರನೇ ಪ್ರಮುಖ ಆರೋಪಿ
ನಿಲ್ಲದ ಪ್ರತೀಕಾರದ ಹತ್ಯೆಗಳು
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ನಿಷೇಧಿತ ಉಗ್ರ ಸಂಘಟನೆ ಪಿಎಫ್ಐನ ಕಾರ್ಯಕರ್ತರೇ ಈ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದು ಪ್ರಕರಣವನ್ನು ಎನ್ಐಎ ತನಿಖೆ ನಡೆಸಿತ್ತು. ಈ ಪ್ರಕರಣದಿಂದಲೇ ಪಿಎಫ್ಐ ಅನ್ನು ಕೆಂದ್ರ ಸರ್ಕಾರ ನಿಷೇಧಿಸಿತ್ತು. ಈ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತಿಕಾರವಾಗಿಯೇ ನಡೆದಿದ್ದು ಸುರತ್ಕಲ್ನ ಫಾಝಿಲ್ ಹತ್ಯೆ. ಇದನ್ನೂ ಓದಿ: ಕರಾವಳಿಯಲ್ಲಿ ಕೋಮುಗಲಭೆ ನಿಗ್ರಹ ಪಡೆ ರಚನೆ: ಸಚಿವ ಪರಮೇಶ್ವರ್ ಘೋಷಣೆ
2022ರ ಮೇ 28ರ ರಾತ್ರಿ ಸುರತ್ಕಲ್ ಮಾರ್ಕೆಟ್ ಬಳಿ ಫಾಝಿಲ್ ನನ್ನು ಬರ್ಬರವಾಗಿ ಕತ್ತರಿಸಿ ಹತ್ಯೆ ನಡೆಸಲಾಗಿತ್ತು. ಈ ಹತ್ಯೆಯ ಪ್ರಮುಖ ಆರೋಪಿಯಾಗಿದ್ದವನು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ. ಹೀಗಾಗಿ ಫಾಝಿಲ್ ಹತ್ಯೆಗೆ ರಿವೇಂಜ್ ಹತ್ಯೆ ಮಾಡಬೇಕೆಂದು ಪಣತೊಟ್ಟ ಫಾಝಿಲ್ನ ತಮ್ಮ ಆದಿಲ್ ಸುಪಾರಿ ಕೊಟ್ಟಾದ್ರೂ ತನ್ನ ಅಣ್ಣನನ್ನು ಕೊಂದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿಯನ್ನು ಮುಗಿಸಲು ಪ್ಲ್ಯಾನ್ ಮಾಡಿದ್ದ. ಅದಕ್ಕೆ ಸಹಕಾರ ನೀಡಿ ಮುಂದೆ ಬಂದ ನಟೋರಿಯಸ್ ಸಫ್ವಾನ್ಗೆ 5 ಲಕ್ಷದ ಸುಫಾರಿ ನೀಡಿ ಅದರಲ್ಲಿ ಮೂರು ಲಕ್ಷ ರೂಪಾಯಿಯನ್ನ ಅಡ್ವಾನ್ಸಾಗಿ ನೀಡಿದ್ದ. ಸಫ್ವಾನ್ ತನ್ನ ತಂಡದೊಂದಿಗೆ ಮೇ 1 ರ ರಾತ್ರಿ ಸುಹಾಸ್ ಶೆಟ್ಟಿಯನ್ನು ನಡು ರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ನಡೆಸಿದ್ದಾರೆ.
ಕರಾವಳಿಯಲ್ಲಿ ಪ್ರತೀಕಾರದ ಹತ್ಯೆಗಳು ನಡೆಯೋದು ಇದೇನು ಹೊಸತಲ್ಲ. ಈ ಹಿಂದೆಯೂ ಒಂದಾದ ಮೇಲೊಂದು ಪ್ರತಿಕಾರದ ಹತ್ಯೆಗಳು ನಡೆದಿದೆ. ಅದರಲ್ಲೂ ಓರ್ವ ಹಿಂದೂವಿನ ಹತ್ಯೆ ಆದ್ರೆ ಅದಕ್ಕೊಬ್ಬ ಮುಸ್ಲಿಮನ ಹತ್ಯೆ ನಡೆಯುತ್ತಲೇ ಇತ್ತು. ಇದೀಗ ಈ ಹತ್ಯೆಯೂ ಅದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಇದನ್ನೂ ಓದಿ: ಜೂ.10ರ ಒಳಗೆ ಸಿದ್ದರಾಮಯ್ಯ ಒಳಮೀಸಲಾತಿ ಘೋಷಣೆ ಮಾಡಬೇಕು: ಗೋವಿಂದ ಕಾರಜೋಳ