ಮಂಗಳೂರು: ಇಲ್ಲಿನ ಅಂತರ್ ರಾಷ್ಟ್ರೀಯ ವಿಮಾನದಲ್ಲಿ ಪತ್ತೆಯಾಗಿದ್ದ ಬಾಂಬ್ ಕುರಿತ ಮಾಹಿತಿನ್ನು ಪೊಲೀಸರು ತಿಳಿಸಿದ್ದು, ಕಚ್ಚಾ ಬಾಂಬ್ ಆಗಿರುವ ಸಾಧ್ಯತೆ ಇದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಹರ್ಷ ತಿಳಿಸಿದ್ದಾರೆ.
ಘಟನೆಯ ಕುರಿತು ಹೆಚ್ಚುವರಿ ಮಾಹಿತಿ ನೀಡಿ ಮಾತನಾಡಿದ ಅವರು, ಸ್ಥಳದಲ್ಲಿದ್ದ ಬಾಂಬ್ ನಿಷ್ಕ್ರಿಯ ದಳದ ತಂಡ ಬಾಂಬ್ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್.ಎಸ್.ಎಲ್) ಕಳುಹಿಸಿ ಕೊಟ್ಟಿದೆ. ಬಾಂಬ್ ಸ್ಫೋಟದ ಬಳಿಕ ದೊರೆತ ವಸ್ತುಗಳ ಆಧಾರದ ಮೇಲೆ ಈ ಬಾಂಬ್ ಕಚ್ಚಾ ಬಾಂಬ್ ಎಂಬುದಾಗಿ ಅವರು ಪ್ರಾಥಮಿಕವಾಗಿ ಅಭಿಪ್ರಾಯ ಪಟ್ಟಿದ್ದಾರೆ. ಅವರ ಅನುಭವ ಹಿನ್ನೆಲೆಯನ್ನು ಈ ಮಾಹಿತಿ ನೀಡಿದ್ದು, ಈ ಕುರಿತು ಸ್ಪಷ್ಟ ಮಾಹಿತಿ ಲಭಿಸಲು ಎಫ್.ಎಸ್.ಎಲ್ ಅವರ ವಿವರವಾದ ವರದಿ ಲಭ್ಯವಾಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಬಾಂಬ್ ಸ್ಫೋಟದ ಬಳಿಕ ಸ್ಥಳದಲ್ಲಿ ವಸ್ತುಗಳನ್ನು ಈಗಾಗಲೇ ಸಂಗ್ರಹಿಸಿ ಎಫ್ಎಸ್ಎಲ್ ಅವರಿಗೆ ನೀಡಿರುವುದರಿಂದ ಬಹುಬೇಗ ಮಾಹಿತಿ ಲಭ್ಯವಾಗಲಿದೆ. ಎಲ್ಲಾ ಆಯಾಮಗಳಿಂದ ನಾವು ಪರಿಶೀಲನೆ ನಡೆಸಿದ್ದೇವೆ ಎಂದರು. ಸದ್ಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ ತನಿಖೆಯನ್ನು ಮತ್ತಷ್ಟು ಚುರಕುಗೊಳಿಸಿರುವ ಪೊಲೀಸರು 3 ತಂಡಗಳಲ್ಲಿ ವಿವಿಧ ಆಯಾಮಾಗಳಿಂದ ತನಿಖೆ ನಡೆಸಿದ್ದಾರೆ. ಅಪರಾಧ ವಿಭಾಗದ ಡಿಸಿಪಿ ಲಕ್ಷ್ಮೀ ಗಣೇಶ್, ಮಂಗಳೂರು ಉತ್ತರ ವಿಭಾಗ ಎಸಿಪಿ ಬೆಳ್ಳಿಯಪ್ಪ ಮತ್ತು ತಂಡ, ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಸಾದ್ ನಾಯಕ್ ಮತ್ತು ತಂಡ ಹಲವು ಆಯಾಮಗಳಲ್ಲಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಬಾಂಬ್ ಅನ್ನು ಬಿಡಿಡಿಎಸ್ ತಂಡದ ಕಾರ್ಯಾಚರಣೆ ನಡೆಸಿ ಸ್ಫೋಟಿಸಿತ್ತು. ಮೊದಲ ಪ್ರಯತ್ನ ತಾಂತ್ರಿಕ ಕಾರಣದಿಂದ ವಿಫಲವಾದರೂ ಕೂಡ ಆ ಬಳಿಕ ಹೊಸ ಕೇಬಲ್ ಜೋಡಿಸಿ ಬಾಂಬ್ ಸ್ಫೋಟಿಸಿ ನಿಷ್ಕ್ರಿಯ ಗೊಳಿಸಲಾಗಿತ್ತು.