ಮಂಗಳೂರು: ಅನಾಥ ಹಿಂದೂ ವೃದ್ಧ ಮಹಿಳೆಯ ಶವ ಸಂಸ್ಕಾರ ಮಾಡಿ ಸ್ಥಳೀಯ ಮುಸ್ಲಿಂ ಸಮುದಾಯದವರು ಮಾನವೀಯತೆ ಮೆರೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಡಾಜೆಯ ನಾಗರಿಕರು ಈ ಕಾರ್ಯ ಮಾಡಿದ್ದಾರೆ. ಕೊಡಾಜೆ ಮಸೀದಿಯ ಹತ್ತಿರದ ಒಂದು ಮನೆಯಲ್ಲಿ ಬಡ ವೃದ್ಧ ಮಹಿಳೆಯು ಅಸುನೀಗಿದ್ದರು. ವೃದ್ಧೆಯು ಕೆಲವು ಸಮಯದಿಂದ ಅನಾರೋಗ್ಯದಿಂದಿದ್ದು ಇವರಿಗೆ ಇನ್ನೊಬ್ಬ ಅನಾರೋಗ್ಯ ಪೀಡಿತ ವೃದ್ಧೆ ಅಕ್ಕ ಮಾತ್ರ ಇದ್ದರು. ಹೀಗಾಗಿ ಕುಟುಂಬಸ್ಥರು ಯಾರೂ ಇಲ್ಲ ಎಂದರಿತ ಊರಿನವರು ತಕ್ಷಣ ಕಾರ್ಯ ಪ್ರವೃತ್ತರಾದರು.
ಕೊಡಾಜೆ ಜುಮ್ಮಾ ಮಸೀದಿಯ ಅಧ್ಯಕ್ಷರು ಸೇರಿದಂತೆ ಊರಿನ ನಾಗರೀಕರು ವೃದ್ಧ ಮಹಿಳೆಯ ಶವ ಸಂಸ್ಕಾರಕ್ಕೆ ಹಣ ಒಟ್ಟುಗೂಡಿಸಿದ್ದಾರೆ. ಸುಮಾರು ಐದು ಸಾವಿರ ರೂಪಾಯಿಯನ್ನು ಸೇರಿಸಿ ಅಂತ್ಯಸಂಸ್ಕಾರಕ್ಕೆ ಬೇಕಾದಂತಹ ವ್ಯವಸ್ಥೆಯನ್ನು ಮಾಡಿದ್ದಾರೆ.
ಅಂಬುಲೆನ್ಸ್ ಕರೆಸಿ ಪುತ್ತೂರಿನ ವೃದ್ಧೆಯ ಶವವನ್ನು ಶವಾಗಾರಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಆ ಬಳಿಕ ಶವ ಸಂಸ್ಕಾರ ಮಾಡಲಾಗಿದೆ. ಈ ಕಾರ್ಯ ಮಾಡುವ ಮೂಲಕ ಧರ್ಮದ ಭೇದಭಾವ ಇಲ್ಲದೆ ಮಾನವೀಯತೆಯ ಕೊಂಡಿ ಈಗಲೂ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದ್ದಾರೆ.