ಮಂಗಳೂರು: ಕೋಟೆಕಾರು ಸಹಕಾರಿ ಬ್ಯಾಂಕ್ನ ಹಗಲು ದರೋಡೆ ಪ್ರಕರಣ (Kotekar Cooperative Bank Robbery) ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಕೇವಲ 5 ನಿಮಿಷದಲ್ಲಿ ಹಣ, ಚಿನ್ನದ ಮೂಟೆ ಕಟ್ಟಿಕೊಂಡು ಹೋಗಿದ್ದ ಖದೀಮರ ಮಾಸ್ಟರ್ ಪ್ಲ್ಯಾನ್ ಏನು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಬ್ಯಾಂಕ್ನಲ್ಲಿ ಲೂಟಿ ಮಾಡಿದ ಡಕಾಯಿತರು ಕೋಟೆಕಾರು ಜಂಕ್ಷನ್ನಿಂದ ಮುಖ್ಯರಸ್ತೆಗೆ ಹೋಗಿ ಅಲ್ಲಿಂದ ಬೇರೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ದರೋಡೆ ವೇಳೆ ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ಕಸಿದಿದ್ದ ಕಿಡಿಗೇಡಿಗಳು, ಮಂಗಳೂರು (Mangaluru) ನಗರವನ್ನು ಸುತ್ತಿ ಕದ್ರಿ ರಸ್ತೆಯ ಬಳಿ ಮೊಬೈಲ್ ಎಸೆದಿದ್ದಾರೆ. ಇದನ್ನೂ ಓದಿ: ಮುಡಾ ಮಾಜಿ ಆಯುಕ್ತನ ಹೆಸ್ರಲ್ಲಿ 198, ಎಂಎಲ್ಸಿ ಹೆಸ್ರಲ್ಲಿ 128 ಬೇನಾಮಿ ಸೈಟ್ – 631 ಸೈಟುಗಳ ಮಾಹಿತಿ ಕೇಳಿದ ಇಡಿ
1 ಕಾರ್ ಮಂಗಳೂರಿನ ಕಡೆಗೆ ಹೋದರೆ ಇನ್ನೊಂದು ಕಾರು ಚಿನ್ನಾಭರಣ ಸಮೇತ ಕೇರಳ ಕಡೆಗೆ ಹೋಗಿದೆ. ಕಾರಿಗೆ ಬೆಂಗಳೂರು ನಂಬರ್ ಪ್ಲೇಟ್ ಅಂಟಿಸಿದ್ದಾರೆ. ತಲಪಾಡಿ ಟೋಲ್ ಗೇಟ್ನಲ್ಲಿ 150 ರೂಪಾಯಿ ಟೋಲ್ ಕಟ್ಟಿದ್ದಾರೆ. ಈ ಟೋಲ್ ಗೇಟ್ನ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರ 2 ತಂಡ ಕಾಸರಗೋಡು, ಕೇರಳದತ್ತ ಹೋಗಿವೆ. ಕೇರಳ ತಲುಪಿದ್ದ ದರೋಡೆಕೋರರು ಬೋಟ್ ಮೂಲಕ ತಮಿಳುನಾಡು ತಲುಪಿರುವ ಶಂಕೆಯೂ ವ್ಯಕ್ತವಾಗಿದೆ. ಅಲ್ಲದೇ ನಕಲಿ ಇಡಿ ಅಧಿಕಾರಿಗಳ ಹೆಸರಲ್ಲಿ ಬೀಡಿ ವ್ಯಾಪಾರಿಗೆ ವಂಚಿಸಿದ್ದ ಗ್ಯಾಂಗೇ ಈ ಕೃತ್ಯವನ್ನು ಎಸಗಿರುವ ಅನುಮಾನವಿದೆ.
ಬ್ಯಾಂಕ್ ದರೋಡೆಯಾದ ಬೆನ್ನಲ್ಲೇ ಆತಂಕಕ್ಕೊಳಗಾದ ಗ್ರಾಹಕರು ಬ್ಯಾಂಕ್ ಮುಂದೆ ಜಮಾಯಿಸಿದ್ದರು. ನಮ್ಮ ಚಿನ್ನ, ಹಣ ನಮಗೆ ಕೊಡಿ ಅಂತ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕ್ನವರ ನಿರ್ಲಕ್ಷ್ಯದಿಂದಲೇ ಈ ದರೋಡೆ ನಡೆದಿದೆ. ಅವರ ಕೈವಾಡವೂ ಇರಬಹುದು ಅಂತ ಗ್ರಾಹಕರು ಆರೋಪಿಸಿದ್ದಾರೆ.