ಮಂಗಳೂರು: ನಗರದ ಕೊಂಚಾಡಿಯ ಶ್ರೀ ಕಾಶಿ ಮಠ ಸಂಸ್ಥಾನದ ಶಾಖಾ ಮಠದಲ್ಲಿರುವ ಶ್ರೀವೆಂಕಟರಮಣ ದೇವಸ್ಥಾನ ಹಾಗೂ ಶ್ರೀಮಹಾಲಸಾ ನಾರಾಯಣಿ ದೇವಸ್ಥಾನದಲ್ಲಿ ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶತಕಲಶಾಭಿಷೇಕ ನೆರವೇರಿಸಿದರು.
ಶ್ರೀಮಹಾಲಸಾ ನಾರಾಯಣಿ ದೇವಳದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀನರಸಿಂಹ ದೇವರಿಗೆ ನೂತನವಾಗಿ ನಿರ್ಮಿಸಲ್ಪಟ್ಟ ಸ್ವರ್ಣಕವಚ ಸಮರ್ಪಣೆ ಶ್ರೀಗಳವರ ಅಮೃತ ಹಸ್ತಗಳಿಂದ ಸಮರ್ಪಿಸಲಾಯಿತು. ರಾತ್ರಿ ಸ್ವರ್ಣ ರಥ ಉತ್ಸವ ಶ್ರೀಗಳವರ ಉಪಸ್ಥಿತಿಯಲ್ಲಿ ಸಾವಿರಾರು ಭಜಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು.
ಕೊಂಚಾಡಿ ಶ್ರೀ ಕಾಶಿ ಮಠದಲ್ಲಿ ಸೋಮವಾರ ಶ್ರೀ ಮಹಾವಿಷ್ಣು ಯಾಗ ಪ್ರಾರಂಭವಾಯಿತು. ಲೋಕ ಕಲ್ಯಾಣಾರ್ಥವಾಗಿ ಕೊಂಚಾಡಿ ಶ್ರೀ ಕಾಶೀಮಠದಲ್ಲಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಮಹಾವಿಷ್ಣು ಯಾಗ, ಕ್ಷೇತ್ರದ ಯಜ್ಞ ಮಂಟಪದಲ್ಲಿ ದೀಪ ಪ್ರಜ್ವಲನೆಯ ಮೂಲಕ ವಿದ್ಯುಕ್ತವಾಗಿ ನೆರವೇರಿತ್ತು..
ಮಂಗಳೂರಿನ ವನಿತಾ ಅಚ್ಚುತ್ ಪೈ ಸಭಾಂಗಣದಲ್ಲಿ ಮೊಕ್ಕಾಂ ಮಾಡಿರುವ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರನ್ನು ಸಕಲ ಗೌರವದೊಂದಿಗೆ ಯಜ್ಞ ಮಂಟಪಕ್ಕೆ ಕರೆತರಲಾಗಿತ್ತು. ಭವ್ಯವಾಗಿ ನಿರ್ಮಿಸಲಾದ ಯಜ್ಞ ಮಂಟಪದಲ್ಲಿ ಶ್ರೀಗಳವರು ದೀಪ ಪ್ರಜ್ವಲನೆ ನಡೆಸಿದರು ಬಳಿಕ ಶ್ರೀಗಳವರ ಅಗ್ರ ಪೂಜೆ ಸಮಿತಿಯ ಪದಾಧಿಕಾರಿಗಳಿಂದ ನಡೆದಿತ್ತು.