ಮಂಗಳೂರು: ಹಾಡಹಗಲೇ ನಿವೃತ್ತ ಸೈನಿಕ ಹಾಗೂ ಆತನ ಪತ್ನಿಯನ್ನ ಹಾರೆಯಿಂದ ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆ ನಗರ ಹೊರವಲಯದ ಕಿನ್ನಿಗೋಳಿ ಏಳಿಂಜೆಯಲ್ಲಿ ನಡೆದಿದೆ.
ನಿವೃತ್ತ ಯೋಧ ವಿನ್ಸೆಂಟ್ ಡಿಸೋಜ (48) ಹಾಗೂ ಪತ್ನಿ ಹೆಲಿನ್ ಡಿಸೋಜ (43) ಹತ್ಯೆಗೊಳಗಾದವರು. ನೆರೆ ಮನೆಯ ಅಲ್ಪನ್ಸ್ ಸಲ್ಡಾ (51) ಕೊಲೆಗೈದ ಆರೋಪಿ.
ವಿನ್ಸೆಂಟ್ ಡಿಸೋಜ ಪ್ರಸ್ತುತ ವಿದೇಶಿ ಹಡಗಿನಲ್ಲಿ ಕೆಲಸ ಮಾಡುತ್ತಿದ್ದರು. ವಿನ್ಸೆಂಟ್ ಹಾಗೂ ಅಲ್ಪನ್ಸ್ ಸಲ್ಡಾ ನೆರೆಮನೆಯವರಾಗಿದ್ದು, ಎರಡೂ ಮನೆಗಳ ಕಾಂಪೌಂಡ್ ಗೋಡೆಗೆ ಮರ ತಾಗಿಕೊಂಡಿತ್ತು. ಹೀಗಾಗಿ ಇಬ್ಬರ ಮಧ್ಯೆ ಕಳೆದ ಕೆಲವು ದಿನಗಳಿಂದ ಗಲಾಟೆ ನಡೆದಿತ್ತು. ಇಂದು ಕೂಡ ಇದೇ ವಿಚಾರವಾಗಿ ಆರಂಭವಾದ ಜಗಳದಲ್ಲಿ ಕೋಪಗೊಂಡ ಅಲ್ಪನ್ಸ್ ಸಲ್ಡಾ ಚಾಕು, ಪಿಕ್ಕಾಸು ಹಾಗೂ ಹಾರೆಯಿಂದ ಹಲ್ಲೆ ನಡೆಸಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ವಿನ್ಸೆಂಟ್ ಡಿಸೋಜ ಸ್ಥಳದಲ್ಲೇ ಸಾವನ್ನಪಿದ್ದರೆ, ಪತ್ನಿ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷಾ, ಪಣಂಬೂರು ಎಸಿಪಿ ಬೆಳ್ಳಿಯಪ್ಪ ಸೇರಿದಂತೆ ಮುಲ್ಕಿ ಪೊಲೀಸರು ಭೇಟಿ ನೀಡಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.