ಮಂಗಳೂರು: ತೀರ್ಥಹಳ್ಳಿಯ ನಾಗಪಾತ್ರಿ ನಾಗರಾಜ್ ಭಟ್ ಅವರಿಗೆ ವಿಚಾರವಾದಿ, ಪ್ರೊ.ನರೇಂದ್ರ ನಾಯಕ್ ಎಂಬವರು ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ಸವಾಲು ಏನು?:
ನಾಗನ ಪಾತ್ರಿ ಕೊಡುವ ಕಲ್ಲನ್ನು ಒಂದೇ ರೀತಿಯ ಹತ್ತು ಬಾಕ್ಸ್ ಗಳನ್ನಿಟ್ಟು ಒಂದರಲ್ಲಿ ಇಡುತ್ತೇನೆ. ಯಾವ ಬಾಕ್ಸ್ ನಲ್ಲಿ ನಾಗ ಕಲ್ಲು ಇದೆ ಎನ್ನುವುದನ್ನು ಹೇಳಬೇಕು. ಮತ್ತೊಂದು ವಿಧಾನವೆಂದರೆ ಕಲ್ಲಿನ ಜೊತೆಗೆ ಒಂದು ಕರೆನ್ಸಿ ನೋಟನ್ನು ಇಡುತ್ತೇನೆ. ನಾಗನಪಾತ್ರಿ ಸರಿಯಾಗಿ ಗ್ರಹಿಸಿ, ನಾಗನ ಕಲ್ಲು ಮತ್ತು ಕರೆನ್ಸಿ ನೋಟಿನ ಸೀರಿಯಲ್ ನಂಬರ್ ಹೇಳಿದರೆ ನನ್ನಲ್ಲಾ ಆಸ್ತಿಯನ್ನು ಅವರಿಗೆ ಬರೆದುಕೊಡುತ್ತೇನೆ ಎಂದು ಓಪನ್ ಚಾಲೆಂಜ್ ಮಾಡಿದ್ದಾರೆ.
ನಾಗಪಾತ್ರಿ ತೆಗೆದ ಜಾಗದಲ್ಲಿ ಇದ್ದಿದ್ದು ಕೆಂಪು ಮಣ್ಣು ಇತ್ತು. ಆದರೆ ಕಲ್ಲು ಹೊರಗೆ ಬಂದಾಗ ಮಣ್ಣಿನ ಬಣ್ಣದಲ್ಲಿ ಬದಲಾವಣೆ ಆಗಿದ್ದನ್ನು ನಾನು ಗಮನಿಸಿದ್ದೇನೆ. ನಾಗ ಕಲ್ಲು ಹೊರತೆಗೆಯುವ ಮುನ್ನ ಅವರು ಅದು ಇರುವ ಜಾಗದ ಚಿತ್ರವನ್ನು ಬಿಡಿಸಿದ್ದರು. ಹೀಗಾಗಿ ಕರೆನ್ಸಿ ನಂಬರ್ ಹೇಳುವ ಸವಾಲು ಹಾಕಿದ್ದೇನೆ. ಒಂದು ವೇಳೆ ನಾಗನ ಕಲ್ಲು ಗುರುತಿಸಿ, ಕರೆನ್ಸಿ ನಂಬರ್ ಹೇಳಿದರೆ ಅದನ್ನು ಅದ್ಭುತವೆಂದು ಒಪ್ಪಿಕೊಳ್ಳುತ್ತೇನೆ. ಮನೆಯ ಒಳಗೆ ಆರು ಅಡಿ ತಳಪಾಯದಲ್ಲಿ ಇರುವ ನಾಗನ ಕಲ್ಲನ್ನು ತೆಗೆದವರಿಗೆ ಇದೇನು ದೊಡ್ಡ ಸವಾಲು ಅಲ್ಲ. ಅಂಥ ಶಕ್ತಿಯಿದ್ದರೆ ಸವಾಲು ಸ್ವೀಕರಿಸಲಿ ಎಂದರು.
ಒಂದು ವೇಳೆ ಅವರು ಸವಾಲಿನಲ್ಲಿ ಗೆದ್ದರೆ ನನ್ನ ಆಸ್ತಿಯನ್ನು ಅವರಿಗೆ ಬರೆದುಕೊಡುತ್ತೇನೆ. ಜೊತೆಗೆ ಸಾಯುವವರೆಗೂ ಅವರ ಗುಲಾಮನಾಗಿ ಇರುತ್ತೇನೆ. ಅವರು ಸೋತರೆ ಜನರು ಸತ್ಯ ಏನು ಎನ್ನುವುದನ್ನು ಅರಿಯುತ್ತಾರೆ ಎಂದು ನರೇಂದ್ರ ನಾಯಕ್ ಹೇಳಿದ್ದಾರೆ.
ನಾಗಪಾತ್ರಿ ಯಾರು?
ತೀರ್ಥಹಳ್ಳಿಯ ನಾಗಪಾತ್ರಿ ನಾಗರಾಜ್ ಭಟ್ ಅವರು ಉಡುಪಿ ಜಿಲ್ಲೆ ಮುದ್ರಾಡಿ ಗ್ರಾಮದ ಬರ್ಸಬೆಟ್ಟು ಮನೆಯಲ್ಲಿ ನಾಗನ ಕಲ್ಲನ್ನು ತೆಗೆದು ತೋರಿಸಿ ಅಚ್ಚರಿ ಮೂಡಿಸಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಹಿಂದೆಯೇ ಮೈಸೂರು, ತುಮಕೂರು ಇನ್ನೂ ಹಲವೆಡೆ ಒಂದೇ ತರಹದ ಪ್ರತಿಮೆಗಳು ತೆಗೆದಿದ್ದಾರೆ. ಸುಮಾರು 7-8 ವರ್ಷದಿಂದ ಈ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv