ಮಂಗಳೂರು: ಉಡುಪಿಯಲ್ಲಿ ಕರ್ನಾಟಕ ಮುಸ್ಲಿಂ ಜಮಾತ್ ಗುರುವಾರ ಆಯೋಜಿಸಿರುವ ಪೌರತ್ವ ಕಾಯ್ದೆ ವಿರುದ್ಧದ ಪ್ರಜಾ ಭಾರತ ಸಭೆಗೆ ನಾನು ಹಾಜರಾಗುವುದಿಲ್ಲ ಎಂದು ಪದ್ಮಶ್ರೀ ಹರೇಕಳ ಹಾಜಬ್ಬ ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಹಾಜಬ್ಬ ಅವರು, ಉಡುಪಿಯಲ್ಲಿ ಸನ್ಮಾನ ಕಾರ್ಯಕ್ರಮ ಇದೆ ಅಂತ ಸ್ನೇಹಿತರು ಹೇಳಿದ್ದರು. ಹೀಗಾಗಿ ಕಾರ್ಯಕ್ರಮಕ್ಕೆ ಬರುತ್ತೇನೆಂದು ಒಪ್ಪಿಕೊಂಡಿದ್ದೆ. ಆದರೆ ನಾಳೆಯ ಕಾರ್ಯಕ್ರಮಕ್ಕೆ ಹೋಗುವುದಕ್ಕೆ ಆಗುವುದಿಲ್ಲ. ತೆರಳಲು ಅನಾನುಕೂಲ ಆಗಿರುವುದರಿಂದ ಹೋಗುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಗೌರವ
ನನ್ನ ಶಾಲೆಯಲ್ಲಿ ಎನ್ಎಸ್ಎಸ್ ಶಿಬಿರ ನಡೆಯುತ್ತಿದೆ. ನನಗೆ ಲಕ್ಷಾಂತರ ಜನ ಸಹಾಯ ಮಾಡಿದ್ದಾರೆ. ನನಗೆ ಎಲ್ಲರೂ ಒಂದೇ, ಯಾವುದೇ ಭೇದ ಭಾವ ಇಲ್ಲ. ಆಯೋಜಕರಿಗೆ ಕರೆ ಮಾಡಿ ಬರುವುದಿಲ್ಲ ಎಂದು ಹೇಳಿದ್ದೇನೆ ಎಂದರು. ಇದನ್ನೂ ಓದಿ: ನಡೆದಾಡುವ ಅರಣ್ಯದ ವಿಶ್ವಕೋಶ ತುಳಸಿ ಗೌಡರಿಗೆ ಪದ್ಮಶ್ರೀ ಗೌರವ
ಉಡುಪಿಯಲ್ಲಿ ಕರ್ನಾಟಕ ಮುಸ್ಲಿಂ ಜಮಾತ್ ಆಯೋಜಿಸಿರುವ ಸಿಎಎ ವಿರುದ್ಧದ ಪ್ರಜಾ ಭಾರತ ಸಭೆಗೆ ಹಾಜಬ್ಬ ಅವರನ್ನು ಉದ್ಘಾಟಕರಾಗಿ ಆಹ್ವಾನಿಸಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಅನ್ಸಾರ್ ಈ ಕುರಿತು ವಿರೋಧ ವ್ಯಕ್ತಪಡಿಸಿದ್ದರು. ಹರೇಕಳ ಹಾಜಬ್ಬ ಅವರು ಜಾತ್ಯಾತೀತವಾಗಿ, ರಾಜಕೀಯವಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ವ್ಯಕ್ತಿಯಾಗಿದ್ದಾರೆ. ಅವರನ್ನು ರಾಜಕೀಯ ಹೋರಾಟಗಳಿಗೆ ಬಳಸಿಕೊಳ್ಳಬಾರದು ಎಂದು ಅನ್ಸಾರ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಹೀಗಾಗಿ ಕಾರ್ಯಕ್ರಮದ ಉದ್ಘಾಟನೆಗೆ ಶಿಕ್ಷಣ ಸಂತ ಹರೇಕಳ ಹಾಜಬ್ಬ ಅವರನ್ನು ಉದ್ಘಾಟಕರನ್ನಾಗಿ ಆಹ್ವಾನಿಸಿದ್ದಕ್ಕೆ ವಿವಾದ ಹುಟ್ಟಿಕೊಂಡಿತ್ತು.
ಕಾರ್ಯಕ್ರಮದ ಬಗ್ಗೆ ಹಾಜಬ್ಬರಿಗೆ ಸ್ಪಷ್ಟ ಮಾಹಿತಿ ಇಲ್ಲ. ಪ್ರಜಾ ಭಾರತ ಕಾರ್ಯಕ್ರಮ ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯ ವಿರುದ್ಧ ನಡೆಯುತ್ತಿರುವ, ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸುವ ಕಾರ್ಯಕ್ರಮ ಆಗಿದೆ. ಇದರಲ್ಲಿ ಹರೇಕಳ ಹಾಜಬ್ಬ ಅವರು ಭಾಗವಹಿಸಿದರೆ ಅವರ ವಿರುದ್ಧ ಪೌರತ್ವ ಕಾಯ್ದೆ ಪರವಾಗಿರುವ ಜನರು ತಿರುಗಿ ಬೀಳುವ ಸಾಧ್ಯತೆ ಇದೆ ಎಂದು ಅನ್ಸಾರ್ ಹೇಳಿದ್ದರು.
ಜಾತ್ಯಾತೀತ- ಧರ್ಮಾತೀತ ಹಾಜಬ್ಬರು ನಾಳೆಯಿಂದ ಹಿಂದೂ ಧರ್ಮದ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆ ಇದೆ. ಈವರೆಗೆ ಯಾವುದೇ ವಿವಾದಗಳಿಗೆ ಸಿಕ್ಕಿಕೊಳ್ಳದ ಹರೇಕಳ ಹಾಜಬ್ಬರನ್ನು ಇದೀಗ ಯಾವುದೋ ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಲಾಗುತ್ತಿದೆ. ಹರೇಕಳ ಹಾಜಬ್ಬ ಅವರು ಶಿಕ್ಷಣರಂಗಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇದೀಗ ಅವರ ಮೂಲಕವೇ ಸಿಎಎ ವಿರುದ್ಧ ಕಾರ್ಯಕ್ರಮ ಉದ್ಘಾಟಿಸಿ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ಕರ್ನಾಟಕ ಮುಸ್ಲಿಂ ಜಮಾತ್ ಮುಂದಾಗಿದೆ ಎಂದು ಅನ್ಸಾರ್ ಆರೋಪಿಸಿದ್ದರು. ಅಲ್ಲದೆ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ನಡೆದಿತ್ತು.