ಮಂಗಳೂರು: ಗಣೇಶೋತ್ಸವದ ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದಾಗಲೇ ಗಾಯಕರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಮಂಗಳೂರಿನ ಬಿಜೈನಲ್ಲಿ ನಡೆದಿದೆ.
ಮಂಗಳೂರಿನ ಬಜ್ಜೋಡಿ ನಿವಾಸಿ ಜೆರಾಲ್ಡ್ ಓಸ್ವಾಲ್ ಡಿಸೋಜ (45) ದುರಂತ ಸಾವು ಕಂಡ ಹಾಡುಗಾರ. ನಗರದ ಬಿಜೈನಲ್ಲಿ ಗಣೇಶೋತ್ಸವ ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ಆರ್ಕೆಸ್ಟ್ರಾ ವೇಳೆ ಘಟನೆ ನಡೆದಿದೆ.
ಜೆರ್ರಿ ಬಜ್ಜೋಡಿ ಎಂದೇ ಹೆಸರು ಪಡೆದಿದ್ದ ಜೆರಾಲ್ಡ್ ನಾಚ್ ಭಾಂಗಾರಾ ಎನ್ನುವ ಕೊಂಕಣಿ ಆಲ್ಬಂ ಸಾಂಗ್ ರಚಿಸಿದ್ದರು. ಹಾಡುತ್ತಿದ್ದಾಗಲೇ ಕುಸಿದು ದುರಂತ ಸಾವು ಕಂಡಿದ್ದು ಜೆರಾಲ್ಡ್ ಅಭಿಮಾನಿಗಳಲ್ಲಿ ಸೂತಕದ ಛಾಯೆ ಆವರಿಸಿದೆ.
ಜೆರಾಲ್ಡ್ ಓಸ್ವಾಲ್ ಡಿಸೋಜ ಅವರು ಅನಂತನಾಗ್ ಹಾಗೂ ಲಕ್ಷ್ಮಿ ಅಭಿನಯಿಸಿರುವ ಚಂದನದ ಗೊಂಬೆ ಸಿನಿಮಾದ ‘ಆಕಾಶದಿಂದ ಧರೆಗಿಳಿದ ರಂಬೆ’ ಹಾಡು ಹಾಡುತ್ತಿದ್ದರು. ಅಷ್ಟೇ ಅಲ್ಲದೆ ವೇದಿಕೆ ಮೇಲೆ ಹಾವಭಾವದೊಂದಿಗೆ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಆದರೆ ಏಕಾಏಕಿ ವೇದಿಕೆ ಮೇಲೆ ಜೆರಾಲ್ಡ್ ಓಸ್ವಾಲ್ ಕುಸಿದು ಬಿದ್ದರು. ಇದನ್ನು ನೋಡಿದ ಕೆಲವರು ವೇದಿಕೆಯ ಕಡೆಗೆ ಹೋಗಿ, ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಜೆರಾಲ್ಡ್ ಓಸ್ವಾಲ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ತಿಳಿಸಿದ್ದಾರೆ.