ಬೆಂಗಳೂರು/ಮಂಗಳೂರು: ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ನಿಗೂಢ ನಾಪತ್ತೆ ಪ್ರಕರಣ ಸಂಬಂಧ ಇದೀಗ ನದಿ ತಟದಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದ್ದು, ಪೊಲೀಸರು ಪ್ರಕರಣ ಭೇದಿಸಲು ಮೂರು ತಂಡಗಳನ್ನು ರಚಿಸಿಕೊಂಡಿದ್ದಾರೆ.
ಶೋಧ ಕಾರ್ಯ ಆರಂಭಿಸಿ ಸುಮಾರು 15 ಗಂಟೆಯಾದರೂ ಎಸ್ ಎಂಕೆ ಅಳಿಯ ಸಿದ್ಧಾರ್ಥ್ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ. ಪೊಲೀಸರು, ಮುಳುಗು ತಜ್ಞರು ಹಾಗೂ ಅಗ್ನಿಶಾಮಕ ದಳದಿಂದ ನಿರಂತರ ಶೋಧಕಾರ್ಯ ಮುಂದುವರಿದಿದೆ.
ಇತ್ತ ಡಿಜಿಪಿ ನೀಲಮಣಿರಾಜುಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಪ್ರಕರಣ ಭೇದಿಸಲು ಪೊಲೀಸರು 3 ತಂಡಗಳನ್ನು ರಚನೆ ಮಾಡಿಕೊಂಡಿದ್ದಾರೆ.
ನಾಪತ್ತೆಯಾದ ಮಾಹಿತಿ ತಿಳಿಯುತ್ತಿದ್ದಂತೆಯೇ ರಾತ್ರಿಯೇ ಲೈಟ್ ಹಿಡಿದುಕೊಂಡು ಹುಡುಕಾಟ ಆರಂಭಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದು ಮುಂಜಾನೆ 4 ಗಂಟೆಯಿಂದಲೇ ಹುಡುಕಾಟ ಆರಂಭಿಸಲಾಗಿದೆ. ಇದನ್ನೂ ಓದಿ: ಎಸ್ಎಂಕೆ ಅಳಿಯ ನಾಪತ್ತೆ- ಪೊಲೀಸರಿಂದ ಸಿದ್ದಾರ್ಥ್ ಡ್ರೈವರ್ ವಿಚಾರಣೆ
ಒಟ್ಟಿನಲ್ಲಿ ಆಗರ್ಭ ಶ್ರೀಮಂತರಾಗಿದ್ದ ಸಿದ್ಧಾರ್ಥ್ ಅವರು ಫೋನಿನಲ್ಲಿ ಮಾತನಾಡಿಕೊಂಡು ಸೇತುವೆ ಮೇಲಿಂದ ಕಾಲು ಜಾರಿ ಬಿದ್ದಿದ್ದಾರೋ ಅಥವಾ ಹಾರಿದ್ದಾರೋ ಹೀಗೆ ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಕೂಡ ನಡೆಯುತ್ತಿದೆ.