ಮಂಗಳೂರು: ಕಟ್ಟಡ ಕಾಮಗಾರಿ ಸಂದರ್ಭದಲ್ಲಿ ಮಣ್ಣು ಕುಸಿತವಾದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ಉದ್ಯಮಿ ಎ.ಜೆ ಶೆಟ್ಟಿ ಅವರಿಗೆ ಸೇರಿರುವ ಕಟ್ಟಡದಲ್ಲಿ ಈ ಅವಘಡ ನಡೆದಿದೆ. ಮೃತರನ್ನು ಬಾಗಲಕೋಟೆ ಜಿಲ್ಲೆಯ ಭೀಮಣ್ಣ (35) ಮತ್ತು ಪಶ್ಚಿಮ ಬಂಗಾಳ ಮೂಲದ ಮಸೂದ್ (28) ಎಂದು ಗುರುತಿಸಲಾಗಿದೆ.
ಬಿಲ್ಡರ್ಸ್ಗಳು ರಸ್ತೆಯ ಮಣ್ಣನ್ನು ಅವೈಜ್ಞಾನಿಕವಾಗಿ ಅಗೆದ ಪರಿಣಾಮ ಕಾರ್ಮಿಕರ ಮೇಲೆ ಮಣ್ಣು ಕುಸಿದಿದೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ನಾಲ್ಕು ಮಂದಿ ಕಾರ್ಮಿಕರು ಪಾರಾಗಿದ್ದಾರೆ. ಅವಘಡ ಸಂಭವಿಸಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಮಣ್ಣಿನಡಿಯಿಂದ ಕಾರ್ಮಿಕರನ್ನು ಮೇಲೆತ್ತುವ ಕಾರ್ಯಾಚರಣೆ ನಡೆಸಿದರು. ಜೆಸಿಬಿ ಮೂಲಕವೂ ಮಣ್ಣು ತೆಗೆಯುವ ಕಾರ್ಯಾಚರಣೆ ನಡೆಸಲಾಯಿತು. ಸದ್ಯ ಮಣ್ಣಿನಡಿಗೆ ಸಿಲುಕಿದ್ದ ಇಬ್ಬರು ಕಾರ್ಮಿಕರ ಮೃತ ದೇಹವನ್ನು ಈಗಾಗಲೇ ಹೊರಕ್ಕೆ ತೆಗೆಯಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ತಡೆಗೋಡೆ ಕಟ್ಟುತ್ತಿದ್ದ ಸಂದರ್ಭದಲ್ಲಿ ಮಣ್ಣಿನ ಗೋಡೆ ಕುಸಿದಿದೆ. ಈ ಅನಾಹುತ ಮಂಗಳೂರಿಗೆ ಬಹಳ ದುಃಖಕರವಾದ ಘಟನೆಯಾಗಿದೆ. 2 ಮೂರು ವರ್ಷಗಳ ಹಿಂದೆ ಕಾಮಗಾರಿಗಳನ್ನು ಪ್ರಾರಂಭ ಮಾಡಿದ್ದಾರೆ. ಯಾಕಂದ್ರೆ ಕಟ್ಟಡ ಈಗಾಗಲೇ ಮುಕ್ಕಾಲುವಾಸಿ ಮೇಲಕ್ಕೆ ಏರಿದೆ. ಮಹಾನಗರ ಪಾಲಿಕೆಯಿಂದ ಲೈಸನ್ಸ್ ಇನ್ನಿತರ ವ್ಯವಸ್ಥೆಗಳನ್ನು ಪಡೆದುಕೊಂಡೇ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರಬಹುದು. ಆದರೆ ಈ ಕಾಮಗಾರಿ ಮೇಲೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆಯೋ ಇಲ್ಲವೋ ಎಂಬುದರ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ ಎಂದರು.