-ಕಾರಿನಲ್ಲೇ ಕೊಚ್ಚಿ ಕೊಲೆ
ಮಂಗಳೂರು: ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಒಂದೇ ದಿನದಲ್ಲಿ ರೌಡಿಶೀಟರ್ ಓರ್ವ ಬರ್ಬರವಾಗಿ ಹತ್ಯೆಗೀಡಾದ ಘಟನೆ ದಕ್ಷಿಣ ಕನ್ನಡದ ಬಿ.ಸಿ.ರೋಡ್ ನಲ್ಲಿ ನಡೆದಿದೆ.
ಕೇರಳ ಮೂಲದ ಮುತ್ತಾಸಿಮ್ ಯಾನೆ ತಸ್ಲಿಮ್ ಬರ್ಬರವಾಗಿ ಕೊಲೆಯಾದ ನಟೋರಿಯಸ್ ರೌಡಿ. ಮುತ್ತಾಸಿಮ್ ಮೃತದೇಹ ಕಾರಿನಲ್ಲಿ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನ ನಗ್ರಿ ಮೈದಾನದಲ್ಲಿ ಇನ್ನೋವಾ ಕಾರ್ ಅನಾಥವಾಗಿ ನಿಂತಿದ್ದನ್ನು ನೋಡಿದ ಸ್ಥಳೀಯರು ಹತ್ತಿರ ಹೋಗಿ ಗಮನಿಸಿದ್ದು, ಆಗ ಅದರೊಳಗೆ ಮೃತದೇಹ ಕಂಡಿದೆ. ತಕ್ಷಣ ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಪರಿಶೀಲಿಸಿದಾಗ ಈತ ಮುತ್ತಾಸಿಮ್ ಎಂದು ಗೊತ್ತಾಗಿದೆ.
ಭೂಗತ ಜಗತ್ತಿನ ನೇರ ಸಂಪರ್ಕ ಹೊಂದಿದ್ದ ಮುತ್ತಾಸಿಮ್ ಕಳೆದ ವರ್ಷ ಮಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿ ಬೆಳಗಾವಿ ಜೈಲಿನಲ್ಲಿದ್ದನು. ಎರಡು ದಿನದ ಹಿಂದೆ ಜಾಮೀನು ಪಡೆದು ಹೊರ ಬಂದಿದ್ದನು. ಆದರೆ ಆ ಬಳಿಕ ಆತ ನಾಪತ್ತೆಯಾಗಿದ್ದು, ದುಷ್ಕರ್ಮಿಗಳು ಆತನನ್ನು ಬೆಳಗಾವಿಯಿಂದಲೇ ಕಿಡ್ನಾಪ್ ಮಾಡಿ ತಂದಿದ್ದು ಒಂದು ದಿನದ ಬಳಿಕ ಆತನನ್ನು ಹತ್ಯೆ ಮಾಡಿ ಕಾರಿನಲ್ಲೇ ಮೃತದೇಹವನ್ಬು ಬಿಟ್ಟು ಪರಾರಿಯಾಗಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.