ಮಂಗಳೂರು: ಮಂಗಳೂರಿನ ಏರ್ಪೋರ್ಟ್ನಲ್ಲಿ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿ ಆದಿತ್ಯ ರಾವ್ಗೆ ಮಂಗಳೂರಿನ ನಾಲ್ಕನೇ ಜಿಲ್ಲಾ ನ್ಯಾಯಾಲಯ ಪ್ರತ್ಯೇಕ ಎರಡು ಶಿಕ್ಷೆ ಪ್ರಮಾಣವನ್ನು ವಿಧಿಸಿ ತೀರ್ಪು ಪ್ರಕಟಿಸಿದೆ.
2020ರ ಜನವರಿ 20ರಂದು ಮಂಗಳೂರಿನ ಏರ್ಪೋರ್ಟ್ಗೆ ಬಾಂಬ್ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 22ರಂದು ಬೆಂಗಳೂರಿನಲ್ಲಿ ಆದಿತ್ಯ ಶರಣಾಗಿದ್ದ. ಆ ಬಳಿಕ ಪ್ರಕರಣ ಕೋರ್ಟ್ನಲ್ಲಿ ಇತ್ತು. ಇಂದು ಜಿಲ್ಲಾ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಎರಡು ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು, ಒಂದು ಸೆಕ್ಷನ್ನಡಿ 20 ವರ್ಷ ಜೈಲು ಮತ್ತು 10 ಸಾವಿರ ರೂ. ದಂಡ, ಮತ್ತೊಂದು ಸೆಕ್ಷನ್ನಡಿ 5 ವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಚೆನ್ನೈನಿಂದ ರಾಸಾಯನಿಕ ತರಿಸಿದ್ದ ಬಾಂಬರ್- ಸ್ಫೋಟಕ ವಿಚಾರ ಬಾಯ್ಬಿಟ್ಟ ಆದಿತ್ಯ
ಉಡುಪಿ ಜಿಲ್ಲೆಯ ಮಣಿಪಾಲ ಮೂಲದ ಆದಿತ್ಯ ರಾವ್, ಮೆಕ್ಯಾನಿಕಲ್ ಎಂಜಿನಿಯರ್ ಪದವೀಧರನಾಗಿದ್ದ. 2018ರಲ್ಲಿ ಬೆಂಗಳೂರು ಏರ್ಪೋರ್ಟ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಅರ್ಜಿ ತಿರಸ್ಕೃತಗೊಂಡಿತ್ತು. ತನ್ನ ಅರ್ಜಿ ತಿರಸ್ಕೃತವಾಗಿದ್ದಕ್ಕೂ ಆದಿತ್ಯ ರಾವ್ಗೆ ಆಕ್ರೋಶವಿತ್ತು. ಹೀಗಾಗಿ ಅನೇಕ ಬಾರಿ ಆದಿತ್ಯಾ ಏರ್ಪೋರ್ಟ್ಗೆ ಹುಸಿ ಬಾಂಬ್ ಕರೆ ಮಾಡಿದ್ದ. ಬಳಿಕ ಮಂಗಳೂರು ಏರ್ಪೋರ್ಟ್ಗೆ ಬಾಂಬ್ ಇಟ್ಟು ಬಂಧನಕ್ಕೆ ಒಳಗಾಗಿದ್ದ.