ಮಂಗಳೂರು: ಡಿಸೆಂಬರ್ 19 ರಂದು ನಡೆದ ಮಂಗಳೂರಿನ ಗಲಭೆಯ ಸತ್ಯಾಸತ್ಯತೆಯ ಎಲ್ಲಾ ವೀಡಿಯೋಗಳನ್ನು ಬಿಡುಗಡೆ ಮಾಡಿ ಸತ್ಯವನ್ನು ಹೊರ ಹಾಕಿರುವ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ವಿಡಿಯೋ ರಿಲೀಸ್ ಮಾಡಿರೋದು ಸಂತಸ ತಂದಿದೆ. ಸತ್ಯಕ್ಕೆ ಸಾವಿಲ್ಲ. ಸತ್ಯ ಇಂದಲ್ಲ ನಾಳೆ ಹೊರ ಜಗತ್ತಿಗೆ ಗೊತ್ತಾಗುತ್ತದೆ. ಸರ್ಕಾರ ತನ್ನ ಆಡಳಿತ ವೈಫಲ್ಯ ಮುಚ್ಚಿ ಹಾಕಲು ಪ್ರಯತ್ನ ಪಟ್ಟಿತ್ತು. ಆದರೆ ಅದು ಇದೀಗ ಸಾಧ್ಯವಾಗಿಲ್ಲ ಎಂದರು.
ನನ್ನ ಮೇಲೆ ಕೂಡ ಕೇಸ್ ಹಾಕಿ ಬೇರೆ ರೀತಿ ಬಿಂಬಿಸಲು ಸರ್ಕಾರ ಹೊರಟಿತ್ತು. ಆದರೆ ಈ ವಿಡಿಯೋ ಅಂದಿನ ಘಟನೆ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗೊತ್ತಾಗಿದೆ. ನಾನು ಅವತ್ತೇ ಹೇಳಿದ್ದೆ, ಎಲ್ಲಾ ವಿಡಿಯೋ ಬಿಡುಗಡೆ ಮಾಡಿಲ್ಲ ಎಂದು. ಇವತ್ತು ಎಲ್ಲಾ ವಿಡಿಯೋವನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಜನರಿಗೆ ಸತ್ಯ ಗೊತ್ತಾಗಿದೆ. ಹೀಗಾಗಿ ಎಚ್ಡಿಕೆಯವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಇದನ್ನು ಓದಿ: ಮಂಗ್ಳೂರನ್ನು ‘ಕಾಶ್ಮೀರ’ ಮಾಡಲು ಹೊರಟಿದೆ, ಇದನ್ನು ತೋರಿಸಲು 35 ವಿಡಿಯೋ ರಿಲೀಸ್ – ‘ಸಿಡಿ’ದ ಎಚ್ಡಿಕೆ
ತಪ್ಪಿತಸ್ಥರನ್ನು ತನಿಖೆಯಿಂದ ಕೈಬಿಡಿ ಎಂದು ನಾವು ಎಲ್ಲೂ ಹೇಳುತ್ತಿಲ್ಲ. ಆದರೆ ಅಮಾಯಕರನ್ನು ಪ್ರಕರಣದಿಂದ ಕೈಬಿಡಬೇಕು. ನ್ಯಾಯಾಂಗ ತನಿಖೆಗೆ ಆದರೆ ಮಾತ್ರ ಇದೆಲ್ಲಾ ಸರಿಯಾಗಿ ನಡೆಯುತ್ತೆ. ಆದ್ದರಿಂದ ನಾವು ನ್ಯಾಯಾಂಗ ತನಿಖೆಯನ್ನು ಮಾಡಲು ಒತ್ತಾಯಿಸುತ್ತಿದ್ದೇವೆ. ಈ ವೀಡಿಯೋವನ್ನು ನಾವು ಬಿಡುಗಡೆ ಮಾಡಿದರೆ ಇದು ಫೇಕ್ ಎಂದು ಹೇಳಿ ಅದಕ್ಕೆ ಜಾತಿ ಧರ್ಮದ ಲೇಪ ಹಚ್ಚುತ್ತಿದೆ ಎಂದು ರಾಜ್ಯ ಸರ್ಕಾರದ ಮೇಲೆ ಕಿಡಿಕಾರಿದರು.