ಮಂಗಳೂರು: ಕರಾವಳಿಯಲ್ಲಿ ಸ್ವಲ್ಪಮಟ್ಟಿಗೆ ಮಳೆ ಕಡಿಮೆಯಾಗಿದೆ. ಆದರೆ ನದಿಗಳ ಭೋರ್ಗರೆತ ಕಡಿಮೆಯಾಗಿಲ್ಲ. ಮಂಗಳೂರು ನಗರ ಹೊರವಲಯದ ಗುರುಪುರದ ಮೂಲಕ ಹರಿದು ಬರುವ ಫಲ್ಗುಣಿ ನದಿ ಉಕ್ಕಿ ಹರಿಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿಗೂ ನೀರು ನುಗ್ಗಿದೆ.
ಮಂಗಳೂರು-ಮೂಡುಬಿದಿರೆ-ಶಿವಮೊಗ್ಗ ಸಂಪರ್ಕಿಸುವ ಈ ಹೆದ್ದಾರಿ ಸೇರಿದಂತೆ ಅಲ್ಲಿನ ಹಲವಾರು ಮನೆಗಳಿಗೂ ನೀರು ನುಗ್ಗಿದೆ. ಗುರುಪುರದ ವೈದ್ಯನಾಥ ದೇವಸ್ಥಾನದ ಒಳಭಾಗಕ್ಕೂ ನೀರು ಬಂದಿದ್ದು ಭಕ್ತರು, ಅರ್ಚಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೆದ್ದಾರಿಯಲ್ಲಿ ನೀರು ನಿಂತಿದ್ದರೂ ವಾಹನಗಳು ಅದರ ಮೇಲಿಂದಲೇ ಸಾಗುತ್ತಿವೆ.
ನೀರಿನ ಪ್ರಮಾಣ ಹೆಚ್ಚಾದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಆಗುವ ಸಾಧ್ಯತೆಯಿದೆ. ಗುರುಪುರದಲ್ಲಿ ಫಲ್ಗುಣಿ ನದಿಗೆ ಹಳೆ ಸೇತುವೆ ಇದ್ದು ಅದು ಕುಸಿಯುವ ಭೀತಿ ಎದುರಾಗಿದೆ. ಲಾರಿ, ಕಂಟೇನರ್ ವಾಹನಗಳ ಸಂಚಾರದಿಂದ ಸೇತುವೆ ಮಧ್ಯೆ ಹೊಂಡ ಬಿದ್ದಿದ್ದು ಬ್ರಿಟಿಷರ ಕಾಲದ ಸೇತುವೆ ನಿರಂತರ ಮಳೆಯಿಂದಾಗಿ ಕುಸಿಯುವ ಅಪಾಯವಿದೆ. ಸೇತುವೆ ಸನಿಹದಲ್ಲಿ ನೀರು ಹರಿಯುತ್ತಿದ್ದು ಅಪಾಯ ಆಹ್ವಾನಿಸುತ್ತಿದೆ.