ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದರ್ಶ ಗ್ರಾಮದಡಿ ದತ್ತು ತೆಗೆದುಕೊಂಡ ಸುಳ್ಯ ತಾಲೂಕಿನ ಬಳ್ಪ ಗ್ರಾಮದ ಸದ್ಯದ ಸ್ಥಿತಿಗೆ ಕನ್ನಡಿ ಹಿಡಿಯುವ ಪ್ರಸಂಗ ಎದುರಾಗಿದೆ.
ಬಳ್ಪ ಪೇಟೆಯಿಂದ ಮೂರು ಕಿ.ಮೀ ದೂರದಲ್ಲಿರುವ ಪಡಿಕಲ್ಲಾಯ ಎಂಬಲ್ಲಿ ರಸ್ತೆ ಕೆಟ್ಟು ಹೋದ ಕಾರಣ ಅನಾರೋಗ್ಯ ಪೀಡಿತ ವೃದ್ಧರೊಬ್ಬರನ್ನು ಒಂದು ಕಿ.ಮೀ ದೂರಕ್ಕೆ ಹೊತ್ತುಕೊಂಡೇ ತೆರಳಿದ ಘಟನೆ ನಡೆದಿದೆ.
ಪಡಿಕಲ್ಲಾಯ, ಪಾಂಡಿ ಎನ್ನುವ ಅಲ್ಲಿನ ಪ್ರದೇಶಕ್ಕೆ ರಸ್ತೆ ಇದ್ದರೂ ವಾಹನ ಹೋಗದ ಸ್ಥಿತಿಯಿದೆ. ಹೀಗಾಗಿ ಅಂಬುಲೆನ್ಸ್ ತೆರಳದ ಕಾರಣ 72ರ ವೃದ್ಧ ರಾಮಣ್ಣ ಪೂಜಾರಿಯನ್ನು ಸ್ಥಳೀಯರು ಹೊತ್ತುಕೊಂಡೇ ತೆರಳಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಯಂತೆ ದೇಶಾದ್ಯಂತ ಸಂಸದರು ಒಂದು ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಬೇಕಿದೆ. ಅದರಂತೆ, ನಳಿನ್ ಕುಮಾರ್ 2016 ರಲ್ಲಿ ಬಳ್ಪ ಗ್ರಾಮವನ್ನು ದತ್ತು ಪಡೆದಿದ್ದರು.
ಈ ಬಾರಿಯ ಚುನಾವಣೆ ಸಂದರ್ಭ ಬಳ್ಪ ಸಂಪೂರ್ಣ ಅಭಿವೃದ್ಧಿಯಾಗಿದೆ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಇದೀಗ ಆದರ್ಶ ಗ್ರಾಮದ ವಾಸ್ತವ ಸ್ಥಿತಿ ಬೆಳಕಿಗೆ ಬಂದಿದ್ದು. ಸಾಮಾಜಿಕ ಜಾಲತಾಣದಲ್ಲಿ ನಳಿನ್ ಕುಮಾರ್ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ.