ಮಂಗಳೂರು: ಇಂದು ಬೆಳಗ್ಗೆಯಿಂದ ಆತಂಕಕ್ಕೆ ಕಾರಣವಾಗಿದ್ದ ಮಂಗಳೂರು ಬಾಂಬ್ ಪತ್ತೆ ಪ್ರಕರಣ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಹೊರಬಂದಿದೆ. ಶಂಕಿತ ಆರೋಪಿಯನ್ನು ವಿಮಾನ ನಿಲ್ದಾಣದಕ್ಕೆ ಕರೆದುಕೊಂಡ ಬಂದ ಆಟೋ ಚಾಲಕ ಸ್ವತಃ ತಾನೇ ಪೊಲೀಸರ ಎದುರು ಹಾಜರಾಗಿದ್ದಾನೆ.
ಇಂದು ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಪ್ಟಾಪ್ ಬ್ಯಾಗ್ನಲ್ಲಿ ಸಜೀವ ಬಾಂಬ್ ಒಂದು ಪತ್ತೆಯಾಗಿ ಆತಂಕ ಹುಟ್ಟಿಸಿತ್ತು. ಆದರೆ ಅದನ್ನು ಗಮನಿಸಿದ್ದ ಸಿಬ್ಬಂದಿಗಳು ಬಾಂಬ್ ಸ್ಕ್ವಾಡ್ ಮೂಲಕ ಕೆಂಜಾರು ಮೈದಾನದಕ್ಕೆ ತೆಗೆದುಕೊಂಡು ಸ್ಫೋಟಿಸಿ, ಭಾರೀ ದುರಂತವೊಂದನ್ನು ತಪ್ಪಿಸಿದ್ದರು. ಇದನ್ನು ಓದಿ: ಬಾಂಬ್ ಸ್ಫೋಟಿಸಿದ್ದು ಹೇಗೆ? ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ಏನಾಯ್ತು? – ಇಲ್ಲಿದೆ ಪೂರ್ಣ ವಿವರ
ಆಟೋದಲ್ಲಿ ಬಂದ ಅಪರಿಚಿತನೋರ್ವ ಟಿಕೆಟ್ ಕೌಂಟರ್ ಬಳಿ ಕಪ್ಪು ಬಣ್ಣದ ಬ್ಯಾಗ್ ಇರಿಸಿ ನಾಪತ್ತೆ ಆಗಿದ್ದ. ಮಂಗಳೂರು ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಗಳ ಫೋಟೋಗಳು ಲಭ್ಯವಾಗಿದ್ದು, ಕ್ಯಾಪ್ ಹಾಕಿರುವ ಒಬ್ಬ ಕೈಯಲ್ಲಿ ಬ್ಯಾಗ್ ಹಿಡಿದಿದ್ದಾನೆ. ಈ ವ್ಯಕ್ತಿ ನಿಲ್ದಾಣದಿಂದ ಹೊರಹೋಗುವುದನ್ನು ಫೋಟೋಗಳು ಸಿಕ್ಕಿದ್ದವು. ಹಾಗೆಯೇ ಶಂಕಿತ ಬಂದಿದ್ದ ಎನ್ನಲಾದ ಆಟೋದ ಎರಡು ಫೋಟೋಗಳು ಸಹ ಲಭಿಸಿತ್ತು. ಇದನ್ನು ಓದಿ: ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಶಂಕಿತ ಇವನೇನಾ?
ಈ ಫೋಟೋಗಳಲ್ಲಿ ಆರೋಪಿ ವಿಮಾನ ನಿಲ್ದಾಣದಕ್ಕೆ ಆಟೋದಲ್ಲಿ ಬಂದ ಫೋಟೋ ಕೂಡ ಲಭಿಸಿತ್ತು. ಸುದ್ದಿ ತಿಳಿದ ಆಟೋದ ಚಾಲಕ ಪೊಲೀಸ್ ಠಾಣೆಗೆ ಬಂದು ಸ್ವತಃ ಶರಣಾಗಿದ್ದು, ಶಂಕಿತ ಆರೋಪಿಯ ಬಗ್ಗೆ ಮಾಹಿತಿ ನೀಡಿದ್ದಾನೆ. ನನ್ನ ಆಟೋದಲ್ಲಿ ಬಂದ ಶಂಕಿತ ಆರೋಪಿ ತುಳುನಲ್ಲಿ ಮಾತನಾಡುತ್ತಿದ್ದ. ಜೊತೆಗೆ ನನಗೆ 400 ರೂ. ಬಾಡಿಗೆ ಕೊಟ್ಟು ಪಂಪ್ವೆಲ್ ಬಳಿ ಇಳಿದುಕೊಂಡು ಹೋದ ಎಂದು ಹೇಳಿದ್ದಾನೆ. ಆಟೋ ಚಾಲಕನ ಮಾಹಿತಿ ಮೇರೆಗೆ ಮೂರು ವಿಶೇಷ ತಂಡಗಳನ್ನು ರಚಿಸಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.