ಮಂಡ್ಯ: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಬಿ.ಎಸ್ ಯಡಿಯೂರಪ್ಪ ಅವರು ಇಂದು ತನ್ನ ಸ್ವಗ್ರಾಮ ಬೂಕನಕೆರೆಗೆ ತೆರೆಳಿದ್ದಾರೆ. ಈ ವೇಳೆ ಮುಖ್ಯಮಂತ್ರಿಗಳನ್ನ ನೋಡಲು ಬಂದ ರೈತರ ಜೇಬಿಗೆ ಕಳ್ಳರು ಕತ್ತರಿ ಹಾಕಿದ್ದಾರೆ.
ಇಂದು ಯಡಿಯೂರಪ್ಪನವರು ಸಿಎಂ ಆದ ಸಂಭ್ರಮದಲ್ಲಿ ಗ್ರಾಮದೇವತೆಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಕೈಚಳಕ ತೋರಿರುವ ಕಳ್ಳರು ಮೋದೂರು ಗ್ರಾಮದ ಕುಮಾರ್ ಜೇಬಿನಿಂದ 30 ಸಾವಿರ ಮತ್ತು ಸಿದ್ದಪ್ಪ ಎಂಬವರ ಜೇಬಿನಿಂದ 20 ಸಾವಿರ ಹಣ ಎಗರಿಸಿದ್ದಾರೆ.
ರೈತ ಕುಮಾರ್ ಸಂತೆಯಲ್ಲಿ ದನ ತೆಗೆದುಕೊಂಡು ಹೋಗಲು ಹಣ ತಂದಿದ್ದರು. ಸಿದ್ದಪ್ಪ ವ್ಯಾಪಾರದ ಹಣ ಜೇಬಲ್ಲಿ ಇಟ್ಟುಕೊಂಡು ಬಂದಿದ್ದರು. ಮುಖ್ಯಮಂತ್ರಿಗಳನ್ನು ನೋಡಲು ಜನ ಜಂಗುಳಿಯಲ್ಲಿ ನಿಂತಿದ್ದಾಗ ನೂಕಾಟ, ತಳ್ಳಾಟವಾಗಿದೆ ಈ ಸಮಯದಲ್ಲಿ ಕಳ್ಳರು ಹಣ ಎಗರಿಸಿದ್ದಾರೆ. ಕಷ್ಟ ಪಟ್ಟು ದುಡಿದ ಕೂಡಿಸಿದ್ದ ಹಣ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ.