– ನಗುತ್ತಲೇ ಮನವೊಲಿಸಿದ ನಿಖಿಲ್
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರದ ವೇಳೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರಿಗೆ ಮಹಿಳೆಯರು ಫುಲ್ ಕ್ಲಾಸ್ ತೆಗೆದುಕೊಂಡ ಪ್ರಸಂಗ ಇಂದು ಜಿಲ್ಲೆಯಲ್ಲಿ ನಡೆದಿದೆ.
ಕೆ.ಆರ್.ನಗರ ತಾಲೂಕಿನ ಹಂಪಾಪುರ ಗ್ರಾಮದಲ್ಲಿ ಸಾ.ರಾ.ಮಹೇಶ್, ನಿಖಿಲ್, ಮೈತ್ರಿ ಪಕ್ಷಗಳ ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದರು. ಈ ವೇಳೆ ನೀವು ಆಯ್ಕೆಯಾದ ಬಳಿಕ ಹಂಪಾಪುರ ಗ್ರಾಮಕ್ಕೆ ಒಂದೇ ಒಂದು ಬಾರಿ ಭೇಟಿ ನೀಡಿಲ್ಲ. ನಿಮ್ಮ ಬಗ್ಗೆ ಸಾಕಷ್ಟು ಅಭಿಮಾನ ಇಟ್ಟುಕೊಂಡಿದ್ದೇವೆ. ಅದನ್ನ ನೀವು ಉಳಿಸಿಕೊಂಡಿಲ್ಲ. ನಮ್ಮಂತಹ ಬಡವರನ್ನೂ ನೋಡಿ ಎಂದು ಮಹಿಳೆಯರು ತರಾಟೆಗೆ ತಗೆದುಕೊಂಡರು.
ಸಚಿವ ಸಾ.ರಾ.ಮಹೇಶ್ ಅವರು ಮಹಿಳಾ ಸಂಘದ ಮನೆ ಕಟ್ಟಿಸಿಕೊಟ್ಟಿಲ್ಲ ಎಂದು ಮಹಿಳೆಯರು ಕಿಡಿಕಾರಿದರು. ನೀವು ಮುಂದೆ ಹೀಗೆ ಮಾಡಬೇಡಿ ಅಂತ ನಿಖಿಲ್ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿಕೊಂಡರು.
ಈ ವೇಳೆ ಸಚಿವರ ಬೆಂಬಲಕ್ಕೆ ನಿಂತ ನಿಖಿಲ್ ಕುಮಾರಸ್ವಾಮಿ, ನಗುತ್ತಲೇ ಮಹಿಳೆಯರ ಮನವೊಲಿಸುವ ಯತ್ನ ಮಾಡಿದರು. ಇದಾದ ಬಳಿಕ ಮಹಿಳೆಯೊಬ್ಬರು, ನೀವು ಆಯ್ಕೆಯಾದ ಬಳಿಕ ಗ್ರಾಮಕ್ಕೆ ಭೇಟಿ ನೀಡಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಿಮ್ಮ ಪಕ್ಷದ ಮೇಲೆ ನಮಗೆ ಬಹಳ ಅಭಿಮಾನವಿದೆ. ಅದನ್ನು ಉಳಿಸಿಕೊಳ್ಳಿ ಎಂದು ನಿಖಿಲ್ ಕುಮಾರಸ್ವಾಮಿ ಅವರಿಗೆ ಕಿವಿ ಮಾತು ಹೇಳಿದರು.