ಮಂಡ್ಯ: ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ರಾಜಕೀಯ ವ್ಯಭಿಚಾರಿ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ಕಿಡಿಕಾರಿದ್ದಾರೆ.
ಇಂದು ಮಂಡ್ಯ ಜಿಲ್ಲೆ, ನಾಗಮಂಗಲ ಪಟ್ಟಣದಲ್ಲಿ ದೇವೇಗೌಡರ ಕುಟುಂಬದ ಬಗ್ಗೆ ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಆತ ರಾಜ್ಯ ಮಟ್ಟದ ನಾಯಕರ ಜೊತೆ ಗುರುತಿಸಿಕೊಳ್ಳುವುದಕ್ಕೆ ಪ್ರಚಾರಕ್ಕಾಗಿ ಹಾಗೆಲ್ಲಾ ಮಾತನಾಡುತ್ತಾನೆ ಎಂದು ವಾಗ್ದಾಳಿ ಮಾಡಿದರು.
ಕ್ಷೇತ್ರದ ಜನರು ನೀಡಿರುವ ತೀರ್ಪಿಗೆ ಬೆಲೆ ಕೊಟ್ಟು ಸುಮ್ಮನಿರುವುದು ಒಳಿತು. ಮೈತ್ರಿ ಸರ್ಕಾರ ಬಿದ್ದಾಗಲೇ ನಾವು ಮಧ್ಯಂತರ ಚುನಾವಣೆಗೆ ರೆಡಿಯಾಗಿದ್ದೇವೆ. ನಮಗೆ ಯಾರೂ ಅನಿವಾರ್ಯವಲ್ಲ. ಆದರೆ ನಾವು ಎಲ್ಲರಿಗೂ ಅನಿವಾರ್ಯವಾಗಿದ್ದೇವೆ. ಕಾಂಗ್ರೆಸ್ ಕೆಲ ನಾಯಕರಿಂದ ಕುಮಾರಸ್ವಾಮಿ ಅವರು ಬೇಸರಗೊಂಡು ಈ ರೀತಿ ಹೇಳಿಕೆಗಳನ್ನು ನೀಡಿದ್ದಾರೆ ಅವರ ಬಗ್ಗೆ ಯಾರು ವ್ಯಂಗ್ಯವಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.