-ಸಿನಿಮಾದವರ ಹಣೆಬರಹ ನನಗೆ ಗೊತ್ತಿದೆ
ಮಂಡ್ಯ: ನಟರಾದ ದರ್ಶನ್ ಮತ್ತು ಯಶ್ ನಟನೆ ಸಿನಿಮಾರಂಗಕ್ಕೆ ಮಾತ್ರ ಸೀಮಿತವಾಗಿರಲಿ ರಾಜಕೀಯಕ್ಕೆ ಬೇಡ ಎಂದು ಮತ್ತೊಮ್ಮೆ ಜೋಡೆತ್ತುಗಳಿಗೆ ಮಾಜಿ ಸಂಸದ ಶಿವರಾಮೇಗೌಡ ಟಾಂಗ್ ಕೊಟ್ಟಿದ್ದಾರೆ.
ಇಂದು ಜಿಲ್ಲೆಯ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿನಿಮಾದವರ ಹಣೆಬರಹ ನನಗೆ ಗೊತ್ತಿದೆ. ಅವರು ಸಿನಿಮಾದಲ್ಲಿ ನೋಡೋದಕ್ಕಷ್ಟೇ ಚಂದ. ರಾಜಕೀಯದಲ್ಲಲ್ಲ ಎಂದು ದರ್ಶನ್ ಮತ್ತು ಯಶ್ ವಿರುದ್ಧ ಕಿಡಿಕಾರಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಶ್ ರಾಜಕೀಯಕ್ಕೆ ಬಂದರು. ಆದರೆ ಅವರು ಜನರಿಗೆ ಸುಳ್ಳು ಭರವಸೆ ನೀಡಲಿಲ್ಲ. ಜೋಡೆತ್ತುಗಳ ತರಹ ಊರೂರು ತಿರುಗಿ ತಮಟೆ ಬಾರಿಸಿಕೊಂಡು ನಾವಿದ್ದೀವಿ. ನಿಮ್ಮ ಎಲ್ಲಾ ಕಷ್ಟ ನಿವಾರಣೆ ಮಾಡುತ್ತೇವೆ ಎನ್ನಲಿಲ್ಲ ಎಂದು ಲೋಕಸಭಾ ಚುನಾವಣೆ ವೇಳೆ ಊರೂರು ಸುತ್ತಿ ಸುಮಲತಾ ಪರ ಪ್ರಚಾರ ನಡೆಸಿದ್ದ ದರ್ಶನ್ ಮತ್ತು ಯಶ್ ಅವರ ಕಾಲೆಳೆದಿದ್ದಾರೆ.
ಸಿನಿಮಾದವರಿಗೆ ಗೌರವ ನೀಡೋಣ, ಅವರ ಸಿನಿಮಾವನ್ನು ದುಡ್ಡು ಕೊಟ್ಟು ನೋಡೋಣ. ಆದರೆ ಸಿನಿಮಾ ನಟರು ಚಿತ್ರರಂಗಕ್ಕಷ್ಟೇ ಸೀಮಿತವಾಗಬೇಕು ರಾಜಕೀಯಕ್ಕೆ ಬೇಡ ಎನ್ನುವುದನ್ನ ಜನ ಅರ್ಥ ಮಾಡಿಕೊಳ್ಳಬೇಕು. ಕಡೆಗೆ ನಿಮ್ಮ ಕಷ್ಟಕ್ಕೆ ಬರೋದು ಸಿನಿಮಾದವರಲ್ಲ ನಾವೇ ಅನ್ನೋದು ಜನರಿಗೆ ಅರ್ಥವಾಗಬೇಕು ಎಂದು ಹೇಳಿದರು.
ಇದೇ ವೇಳೆ ಜೆಡಿಎಸ್ ಅವರು ಕರೆದರೆ ಅವರ ಕಚೇರಿಗೂ ಹೋಗುತ್ತೇನೆ ಎಂದು ಎಂದು ಹೇಳಿದ್ದ ಸುಮಲತಾ ಅವರ ಬಗ್ಗೆ ಮಾತನಾಡಿದ ಅವರು, ಸುಮಲತಾ ಅವರು ಬೇಕಿದ್ದರೆ ಕಾಂಗ್ರೆಸ್ ಮತ್ತು ಬಿಜೆಪಿ ಕಚೇರಿಗೆ ಹೋಗಲಿ. ಆದರೆ ಜೆಡಿಎಸ್ನವರು ಅವರನ್ನು ಕಚೇರಿಗೆ ಕರೆಯುವುದಿಲ್ಲ ಎಂದು ತಿರುಗೇಟು ನೀಡಿದರು.