ಮಂಡ್ಯ: ರಾಜ್ಯದಲ್ಲಿ ಮುಖ್ಯಮಂತ್ರಿಗಳು ತನ್ನ ಹೆಸರನ್ನು ಉಳಿಸಿಕೊಳ್ಳಲು ರೇವಣ್ಣನ ಹೆಸರನ್ನು ಡ್ಯಾಮೇಜ್ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಆರೋಪಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಈ ಸ್ಥಿತಿಗೆ ಮುಖ್ಯಮಂತ್ರಿಗಳೇ ಕಾರಣ. ಆದರೆ ರೇವಣ್ಣ ಅವರಿಂದ ಈ ರೀತಿ ಆಗಿದೆ ಅಂತಿದ್ದಾರೆ. ಹಾಗಾದರೆ ಅವರನ್ನೇ ಸಚಿವ ಸ್ಥಾನದಿಂದ ಹೊರಗಿಟ್ಟು ಸರ್ಕಾರ ನಡೆಸಬಹುದಿತ್ತು ಎಂದು ಗರಂ ಆದರು.
ಮೈತ್ರಿ ಸರ್ಕಾರ ಈ ರೀತಿ ಆಗಲು ಅಣ್ಣ-ತಮ್ಮಂದಿರೇ ಹೊಣೆ ಮುಖ್ಯಮಂತ್ರಿ ಇಲ್ಲದೇ ರೇವಣ್ಣ ಒಬ್ಬರೇ ಹೊಣೆಯಾಗಲು ಸಾಧ್ಯವಿಲ್ಲ. ಅಂತಿಮವಾಗಿ ಸಹಿ ಹಾಕುವವರು, ನಿರ್ಧಾರ ತೆಗೆದುಕೊಳ್ಳುವವರು ಮುಖ್ಯಮಂತ್ರಿ ತಾನೇ. ಮುಖ್ಯಮಂತ್ರಿಗಳು ತನ್ನ ಹೆಸರು ಉಳಿಸಿಕೊಳ್ಳಲು ರೇವಣ್ಣ ಹೆಸರು ಡ್ಯಾಮೇಜ್ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯದಲ್ಲಿ ನಡೆಯುತ್ತಿರವ ವಿದ್ಯಮಾನಗಳಿಗೆ ನೇರ ಹೊಣೆ ಮುಖ್ಯಮಂತ್ರಿಯೇ ಹೊರತು ರೇವಣ್ಣ ಅಲ್ಲ. ರಾಜಕೀಯ ಅನುಭವ ಇಲ್ಲದವರು ರೇವಣ್ಣ ಎನ್ನುತ್ತಾರೆ ಅಷ್ಟೇ. ರೇವಣ್ಣ ಅವರು ಮುಖ್ಯಮಂತ್ರಿಗಳನ್ನು ಮೀರಿ ಏನು ಮಾಡಲು ಸಾಧ್ಯ. ಹೀಗಾಗಿ ರೇವಣ್ಣ ಅವರ ಹಿಂದೆ ಮುಖ್ಯಮಂತ್ರಿಗಳು ಇದ್ದಾರೆ ಎಂದು ಸಿಎಂ ವಿರುದ್ಧ ಕಿಡಿಕಾರಿದರು.
ದೇವೇಗೌಡರ ಕುಟುಂಬದವರ ಕಿರುಕುಳ ರಾಜೀನಾಮೆಗೆ ಕಾರಣ ಎಂಬ ವಿಚಾರದ ಬಗ್ಗೆ ಮಾತನಾಡಿ, ಹೆಗಡೆಯವರ ಕಾಲದಿಂದ ಇಲ್ಲಿಯವರೆಗೂ ಅದು ಮುಂದುವರಿದಿದೆ ಎಂದು ಪರೋಕ್ಷವಾಗಿ ಕಿರುಕುಳದ ಬಗ್ಗೆ ಚಲುವರಾಯ ಸ್ವಾಮಿ ಒಪ್ಪಿಕೊಂಡರು. ನಾವು ಏಳು ಜನ ತಪ್ಪು ಮಾಡಿ ಪಕ್ಷ ಬಿಟ್ಟು ಬರಲಿಲ್ಲ. ಇಂದು ನಾರಾಯಣಗೌಡ ಪಕ್ಷ ಬಿಟ್ಟು ಬಂದು ಮಾತನಾಡುತ್ತಿದ್ದಾರೆ. ಅದೇ ಸ್ಥಿತಿ ಸಚಿವ ಪುಟ್ಟರಾಜುಗೂ ಬರಬಹುದು ಎಂದು ಭವಿಷ್ಯ ನುಡಿದರು.