ಮಂಡ್ಯ: ಜಿಲ್ಲೆಯಲ್ಲಿ ನೀರಿಲ್ಲದೆ ಬೆಳೆಗಳು ಒಣಗುತ್ತಿದ್ದು, ರಾಜಮಾತೆ ಪ್ರಮೋದಾ ದೇವಿಯವರು ಕೆಆರ್ಎಸ್ ಅಣೆಕಟ್ಟೆಗೆ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರೆ ಉತ್ತಮ ಮಳೆಯಾಗಿ ಅಣೆಕಟ್ಟೆ ಭರ್ತಿಯಾಗಬಹುದು ಎಂದು ಮಂಡ್ಯ ಜನ ಮನವಿ ಮಾಡುತ್ತಿದ್ದಾರೆ.
ಈ ಹಿಂದೆ ಮಳೆಯಾಗದೇ ಬರಗಾಲದ ಛಾಯೆ ಆವರಿಸಿದಾಗ ಮೈಸೂರು ರಾಜ ಮನೆತನದವರು ಕೆಆರ್ಎಸ್ ಅಣೆಕಟ್ಟೆಗೆ ಪೂಜೆ ಸಲ್ಲಿಸಿ, ವರುಣ ದೇವನನ್ನು ಪ್ರಾರ್ಥಿಸಿದಾಗ ಉತ್ತಮ ಮಳೆಯಾಗಿ ಅಣೆಕಟ್ಟು ತುಂಬಿತ್ತು.
ಈ ಬಾರಿ ಮಳೆ ಬಾರದೇ ಇದ್ದರೆ ಪರಿಸ್ಥಿತಿ ವಿಕೋಪ ಹೋಗುವ ಸಾಧ್ಯತೆಯಿದೆ. ಹೀಗಾಗಿ ಈ ಸಂಕಷ್ಟ ಸ್ಥಿತಿಯಲ್ಲಿ ರಾಜಮಾತೆ ಪ್ರಮೋದಾದೇವಿಯವರು ರೈತರ ಏಳಿಗೆಗಾಗಿ ಕೆಆರ್ಎಸ್ ಅಣೆಕಟ್ಟೆಗೆ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಬೇಕು ಎಂದು ಮಂಡ್ಯ ಜನ ಮನವಿ ಮಾಡಿದರು.
ಇಂದು ಮಂಡ್ಯ ನಗರದ ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ಮುಖಂಡ ಶಿವಕುಮಾರ್ ಆರಾಧ್ಯ ದೇವಾಲಯದ ಸುತ್ತ ಮಳೆಯಾಗಲಿ ಎಂದು ಉರುಳು ಸೇವೆ ಮಾಡಿದರು. ಮುಖ್ಯಮಂತ್ರಿ ಕೇವಲ ತಮ್ಮ ಕುಟುಂಬದ ಏಳಿಗೆಗೆ ಪೂಜೆ ಸಲ್ಲಿಸದೇ, ರಾಜ್ಯದಲ್ಲಿನ ಬರಗಾಲ ನಿವಾರಣೆಗೂ ವಿಶೇಷ ಪೂಜೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.