ಮಂಡ್ಯ: ಪುರಾಣ ಪ್ರಸಿದ್ಧ ಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೂ ಉಡುಪಿಯ ಪೇಜಾವರ ಮಠದ ಪೀಠಾಧ್ಯಕ್ಷ ಶ್ರೀ ವಿಶ್ವೇಶತೀರ್ಥ ಶ್ರೀಗಳಿಗೂ ಅವಿನಾಭಾವ ಸಂಬಂಧವಿದ್ದು, ಹಲವು ವರ್ಷಗಳಿಂದ ಹೊಳೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದರು.
ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಹೊರ ವಲಯದಲ್ಲಿ ವ್ಯಾಸರಾಜರು ಮತ್ತು ಶ್ರೀಪಾದ ರಾಜರು ಪ್ರತಿಷ್ಠಾಪಿಸಿರುವ ಹೊಳೆ ಆಂಜನೇಯಸ್ಬಾಮಿ ದೇವಾಲಯವಿದೆ. ಈ ದೇಗುಲಕ್ಕೆ ಪೇಜಾವರ ಶ್ರೀಗಳು ಹಲವು ಬಾರಿ ಭೇಟಿ ನೀಡಿದ್ದರು. 2004ರಲ್ಲಿ ಶ್ರೀಗಳು ಮೊದಲ ಬಾರಿಗೆ ದೇವಾಲಯಕ್ಕೆ ಭೇಟಿ ನೀಡಿದ್ದರು. ಬಳಿಕ 2014 ದೇವಾಲಯದ ಸಮೀರ ರಥ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿ ಭಕ್ತರಿಗೆ ಆಶೀರ್ವದಿಸಿದ್ದರು. ಇದನ್ನೂ ಓದಿ: ಹರ್ನಿಯಾ ಆಪರೇಷನ್ ನಡೆದಾಗಲೇ ಕೊನೆಯಾಸೆ ಬಿಚ್ಚಿಟ್ಟಿದ್ದ ಪೇಜಾವರ ಶ್ರೀ
2015ರಲ್ಲಿ ತುಲಾಭಾರ ಕಾರ್ಯಕ್ರಮದಲ್ಲಿ ಹಾಗೂ 2018ರಲ್ಲಿ ಸೋಂದೇ ಶ್ರೀಗಳ ಜೊತೆ ಹೊಳೆ ಆಂಜನೇಯಸ್ವಾಮಿ ದರ್ಶಕ್ಕೆ ಶ್ರೀಗಳು ಆಗಮಿಸಿದ್ದರು. ದೇವಾಲಯಕ್ಕೆ ಭೇಟಿ ನೀಡಿದ್ದಾಗಲೆಲ್ಲ ಸ್ವತಃ ತಾವೇ ಆಂಜನೇಯನಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಿ ಪೇಜಾವರಿ ಶ್ರೀಗಳು ಪೂಜೆ ಸಲ್ಲಿಸುತ್ತಿದ್ದರು. ಹೀಗಾಗಿ ಮುಂದಿನ ವರ್ಷದ ಮಾರ್ಚ್ ತಿಂಗಳಲ್ಲಿ ಪೇಜಾವರ ಶ್ರೀಗಳಿಗೆ ಬೆಳ್ಳಿ ಸಿಂಹಾಸನ ಕೊಡಬೇಕೆಂದು ದೇವಾಲಯದ ಸಿಬ್ಬಂದಿ ನಿಶ್ಚಯಿಸಿದ್ದರು. ಆದರೆ ಈ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಶ್ರೀಗಳು ಎಲ್ಲರನ್ನು ಅಗಲಿ ಕೃಷ್ಣೈಕ್ಯರಾಗಿದ್ದಾರೆ.