ಮಂಡ್ಯ: ಜಿಲ್ಲೆಯ ಕೆಆರ್ ಪೇಟೆ ಪಟ್ಟಣದಲ್ಲಿನ ಮಾಂಸದಂಗಡಿಗಳು, ಮದ್ಯದಂಗಡಿಗಳು ಸೇರಿದಂತೆ ಇತರ ಅಂಗಡಿಗಳ ಮೇಲೆ ಪುರಸಭೆಯ ಅಧಿಕಾರಿಗಳು ದಾಳಿ ನಡೆಸಿ ಅಂಗಡಿ ಮಾಲೀಕರಿಗೆ ಶುಚಿತ್ವಕ್ಕೆ ಗಮನ ನೀಡದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಆರ್ ಪೇಟೆ ವ್ಯಾಪ್ತಿಯಲ್ಲಿ ಬರುವ ಹಲವು ಮಾಂಸದ ಅಂಗಡಿಗಳು, ಮದ್ಯದ ಅಂಗಡಿಗಳು ಸೇರಿದಂತೆ ಇತರ ಅಂಗಡಿಗಳಲ್ಲಿನ ತ್ಯಾಜ್ಯಗಳಗಳನ್ನು ಪಟ್ಟಣದ ಸಮೀಪವಿರುವ ದೇವೀರಮ್ಮಣ್ಣಿ ಕೆರೆಗೆ ಸುರಿಯುತ್ತಿದ್ದಾರೆ. ಇದರಿಂದ ಕೆರೆಯ ಸೌಂದರ್ಯ ಹಾಳು ಮಾಡುವುದರ ಜೊತೆಗೆ ಪರಿಸರವನ್ನು ಮಾಲಿನ್ಯ ಮಾಡುತ್ತಿದ್ದಾರೆ ಎಂದು ಪುರಸಭೆಗೆ ಸಾರ್ವಜನಿಕರು ದೂರು ನೀಡಿದ್ದರು. ದೂರಿನ ಅನ್ವಯ ಇಂದು ಪುರಸಭೆಯ ಅಧಿಕಾರಿಗಳು ಪಟ್ಟಣದ ಹಲವು ಅಂಗಡಿಗಳಿಗೆ ದಾಳಿ ಮಾಡಿದ್ದಾರೆ.
ದಾಳಿ ಮಾಡಿ ಅಂಗಡಿಗಳಲ್ಲಿ ಇದ್ದ ಪ್ಲಾಸ್ಟಿಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಬೀದಿಗಳಲ್ಲಿ ಸುರಿದಿರುವ ಕಸದ ರಾಶಿಗಳತ್ತ ಅಂಗಡಿ ಮಾಲೀಕರನ್ನು ಕರೆದುಕೊಂಡು ಹೋಗಿ ತರಾಟಗೆ ತೆಗೆದುಕೊಂಡಿದ್ದಾರೆ. ನಗರ ಸ್ವಚ್ಛವಾಗಿ ಇರಬೇಕು ಅಂದ್ರೆ, ಮೊದಲು ನೀವು ಶುಚಿತ್ವ ಕಾಪಾಡಿಕೊಳ್ಳಬೇಕು. ಅದನ್ನು ಬಿಟ್ಟು ಹೀಗೆ ಮಾಡಿದರೆ ಪಟ್ಟಣ ಗಲೀಜಾಗಿ ಇರುತ್ತದೆ. ಇನ್ನೂ ಮುಂದೆ ಕೆರೆಯ ಬಳಿ ಹಾಗೂ ರಸ್ತೆಗಳಲ್ಲಿ ಕಸ ಹಾಕಿದ್ದು ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.