ಮಂಡ್ಯ: ನಾನು ಯಾರ ಮೇಲೂ ಟೀಕೆ ಮಾಡಲು ಹೋಗುವುದಿಲ್ಲ. ಅಭಿವೃದ್ಧಿಯ ಕಡೆ ಮಾತ್ರ ನಾನು ಗಮನಹರಿಸುವುದು ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.
ಸಚಿವರಾದ ಬಳಿಕ ಮೊದಲ ಬಾರಿಗೆ ಮಂಡ್ಯಗೆ ಆಗಮಿಸಿದ ನಾರಾಯಣಗೌಡ, ಮೊದಲು ಪತ್ನಿ ಸಮೇತವಾಗಿ ಲಕ್ಷೀಜನಾರ್ಧನಸ್ವಾಮಿಗೆ ಪೂಜೆ ಸಲ್ಲಿಸಿದ್ರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಜೆಡಿಎಸ್ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದರು. ನಾನು ಯಾರ ಬಗ್ಗೆಯೂ ಸಹ ಟೀಕೆ ಮಾಡಲ್ಲ. ಜಿಲ್ಲೆಯ ಅಭಿವೃದ್ಧಿ ನನ್ನ ಗುರಿ ಅಷ್ಟೇ. ನನ್ನ ಬಗ್ಗೆ ಟೀಕೆ ಮಾಡುವವರು ಸಹ ತಟಸ್ಥವಾಗಿ ಇರಬೇಕು ಎಂದು ಜೆಡಿಎಸ್ ನಾಯಕರಿಗೆ ಎಚ್ಚರಿಕೆ ನೀಡಿದರು.
ಖಾತೆ ಹಂಚಿಕೆಯಾದ ಬಳಿಕ ಮೊದಲನೆಯದಾಗಿ ಮುಚ್ಚಿರುವ ಎರಡು ಸಕ್ಕರೆ ಕಾರ್ಖಾನೆಗಳನ್ನು ತೆರೆಯುವುದು ನನ್ನ ಗುರಿಯಾಗಿದೆ. ಈ ಕುರಿತು ಹೀಗಾಗಲೇ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿದ್ದೇನೆ. ಖಾತೆ ಕುರಿತು ಪ್ರತಿಕ್ರಿಯಿಸಿದ ನಾರಾಯಣಗೌಡ, ನನಗೆ ಯಾವ ಖಾತೆ ಕೊಟ್ಟರು ಸಹ ಜವಾಬ್ದಾರಿಯಿಂದ ನಿರ್ವಹಿಸುತ್ತೇನೆ. ಮಂಡ್ಯ ಜಿಲ್ಲೆಗೆ ಯಾವ ಖಾತೆ ನೀಡಬೇಕು ಎಂದು ಯಡಿಯೂರಪ್ಪ ಅವರಿಗೆ ಗೊತ್ತು. ಹೀಗಾಗಿ ಅವರು ಸೂಕ್ತವಾದ ಖಾತೆಯನ್ನೇ ಕೊಡುತ್ತಾರೆ. ನಾನು ಡಿಮ್ಯಾಂಡ್ ಮಾಡುವುದಿಲ್ಲ. ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಲು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಹಂತ ಹಂತವಾಗಿ ಜಿಲ್ಲೆಯಾದ್ಯಂತ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.