ಮಂಡ್ಯ: ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಅಚ್ಚರಿ ಮೂಡಿಸಿತ್ತು. ಈ ಅಚ್ಚರಿಯ ಫಲಿತಾಂಶಕ್ಕೆ ದೇವರಿಗೆ ಹೊತ್ತುಕೊಂಡಿದ್ದ ಒಂದು ಹರಕೆಯೆ ಪ್ರಮುಖ ಕಾರಣನಾ ಎಂಬ ಪ್ರಶ್ನೆ ಇದೀಗ ಎದ್ದಿದೆ.
ಮಂಡ್ಯ ಜಿಲ್ಲೆ ಜೆಡಿಎಸ್ನ ಭದ್ರ ಕೋಟೆ ಎನ್ನುವಷ್ಟರ ಮಟ್ಟಿಗೆ ರಾಜ್ಯದಲ್ಲಿ ಗುರುತಿಸಿಕೊಂಡಿತ್ತು. ಆದರೆ ಕಳೆದ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿ ನಾರಾಯಣಗೌಡ ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ ಜೆಡಿಎಸ್ ಭದ್ರ ಕೋಟೆಯನ್ನು ಭೇದಿಸಿತ್ತು. ಈ ಕ್ಷೇತ್ರದ ಬಿಜೆಪಿಗೆ ಗೆಲುವಿಗೆ ಸಿಎಂ ಪುತ್ರ ವಿಜಯೇಂದ್ರ, ಸಚಿವ ಅಶ್ವತ್ಥನಾರಾಯಣ, ಹಾಸನ ಶಾಸಕ ಪ್ರೀತಮ್ಗೌಡ ಅವರ ಪಾತ್ರ ಮುಖ್ಯವಾಗಿತ್ತು ಎಂದು ಹಲವರು ಹೇಳುತ್ತಾರೆ. ಆದರೆ ಇದೀಗ ಗೆಲುವಿನ ಹಿಂದೆ ಮತ್ತೊಬ್ಬರ ಶ್ರಮವಿದೆ ಎಂದು ಸ್ವತಃ ವಿಜಯೇಂದ್ರ ಅವರೇ ಹೇಳಿಕೊಂಡಿದ್ದಾರೆ.
ಈ ಕ್ಷೇತ್ರದಲ್ಲಿ ಚುನಾವಣೆ ಮಾಡಬೇಕು ಬನ್ನಿ ಅಣ್ಣ. ಇಲ್ಲಿ ನಾವು ಒಂದು ಬಾರಿ ನಮ್ಮ ಶ್ರಮ ಹಾಕೋಣ ಅಂತ ಕೊಪ್ಪಳ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶರಣು ನನಗೆ ಹೇಳಿದ್ದರು. ಉಪಚುನಾವಣೆಯಲ್ಲಿ ಕೆಲಸ ಮಾಡಲು ಶಕ್ತಿ ತುಂಬಿದ್ದೆ ಶರಣು ಹಾಗಾಗಿ ನಾವು ಉತ್ಸಾಹದಿಂದ ಚುನಾವಣೆ ಎದುರಿಸಿ ಗೆಲವು ಪಡೆದುಕೊಂಡೆವು ಎಂದು ವಿಜಯೇಂದ್ರ ತಿಳಿಸಿದ್ದಾರೆ.
ಸಿಎಂ ಯಡಿಯೂರಪ್ಪ ಅವರ ತವರು ಊರು ಕೆಆರ್.ಪೇಟೆ ಕ್ಷೇತ್ರದಲ್ಲಿ ನಾವು ಗೆಲ್ಲ ಬೇಕು ಎಂದು ಅಂದುಕೊಂಡಿದ್ದೆವು. ಆಗ ನಾನು ವಿಜಯೇಂದ್ರ ಅವರಿಗೆ ಹೇಳಿದಾಗ ಅಲ್ಲಿ ತುಂಬಾ ಕಷ್ಟ ಅಂತ ಹೇಳಿದ್ದರು. ನಮ್ಮಲ್ಲೂ ಆತಂಕ ಇತ್ತು. ಒಂದು ವೇಳೆ ವ್ಯತ್ಯಾಸ ಆದರೆ ವಿಜಯೇಂದ್ರ ಅವರ ರಾಜಕೀಯ ಸ್ವಲ್ಪ ಕುಗ್ಗತ್ತದೆ ಎಂಬ ಮಾತುಗಗಳು ಕೇಳಿ ಬಂದಿದ್ದವು. ಕೆಆರ್.ಪೇಟೆ ಚುನಾವಣೆಯ ಉಸ್ತುವಾರಿ ಎಂದು ವಿಜಯೇಂದ್ರ ಅವರ ಹೆಸರನ್ನು ಘೋಷಣೆ ಮಾಡಲಾಗಿತ್ತು. ಆಗ ನಾನು ಕೆಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿ ಸಾಸಲು ಗ್ರಾಮದಲ್ಲಿದ್ದೆ. ಇಲ್ಲಿನ ಸೋಮೇಶ್ವರ ಹಾಗೂ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ಗೆದ್ದರೆ ಮುಡಿಕೊಟ್ಟು ವಿಜಯೇಂದ್ರ ಅಣ್ಣನ ಜೊತೆ ಪೂಜೆ ಮಾಡಿಸುತ್ತೇವೆ ಎಂದು ಹರಕೆ ಹೊತ್ತಕೊಂಡಿದ್ದೆ. ಅಂತೆಯೇ ನಾವು ಈಗ ವಿಜಯ ಪಡೆದು ವಿಜಯೇಂದ್ರ ಅಣ್ಣನ ಜೊತೆ ಬಂದು ಹರಕೆ ತೀರಿಸಿದ್ದೇವೆ ಎಂದು ಕೊಪ್ಪಳ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶರಣು ಅವರು ಹೇಳಿದ್ದಾರೆ.
ಶರಣು ಅವರು ಹರಕೆ ಹೊತ್ತ ಶಂಭುಲಿಂಗೇಶ್ವರ ಹಾಗೂ ಸೋಮೇಶ್ವರ ದೇವಸ್ಥಾನದಲ್ಲೇ ಸಂಸದೆ ಸುಮಲತಾ ಅಂಬರೀಶ್ ಅವರು ಕೂಡ ಚುನಾವಣೆಗೂ ಮುನ್ನ ಪೂಜೆ ಸಲ್ಲಿಸಿದ್ದರು. ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅವರು ಜಯಭೇರಿ ಬಾರಿಸಿದ್ದರು.
ಒಟ್ಟಾರೆ ಕೆಆರ್.ಪೇಟೆಯ ಜೆಡಿಎಸ್ ಭದ್ರ ಕೋಟೆಯನ್ನು ಭೇದಿಸಲು ಕೇವಲ ಪ್ರಥಮ ದರ್ಜೆಯ ಮಾಸ್ ಲೀಡರ್ ಗಳು ಕಾರ್ಯತಂತ್ರದ ಜೊತೆಗೆ ಬೇರೆ ಜಿಲ್ಲೆಯ ಮುಖಂಡರು ಕಾರಣವಾಗಿದ್ದಾರೆ ಎಂದು ಈಗ ತಿಳಿದುಬಂದಿದೆ. ಇದರ ಜೊತೆಗೆ ಆ ಮುಖಂಡ ಹೊತ್ತ ಹರಕೆಯೂ ಗೆಲವು ತಂದುಕೊಡಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.