ಮಂಡ್ಯ: ಸಕ್ಕರೆ ನಗರಿ ಮಂಡ್ಯ ಜಿಲ್ಲೆಯ ಹಲವು ಭಾಗಗಳಲ್ಲಿ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯ ಕಾಲಭೈರವೇಶ್ವರನ ಬಸಪ್ಪ ಹಾಗೂ ರಾಮನಗರ ಜಿಲ್ಲೆಯ ಕಾವಾಣಾಪುರದ ಬಸಪ್ಪನ ಪವಾಡಗಳು ಜನರಿಗೆ ಅಚ್ಚರಿಯುಂಟು ಮಾಡುತ್ತಿವೆ.
ಬುಧವಾರ ಮಂಡ್ಯ ತಾಲೂಕಿನ ಡಣಾಯಕನಪುರ ಗ್ರಾಮದಲದಲ್ಲಿ ರಾಮನಗರ ಕಾವಾಣಾಪುರದ ಬಸಪ್ಪ ಅಳುತ್ತಿದ್ದ ಮಗುವನ್ನು ಮಲಗಿಸಿ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದ್ದಾನೆ. ಡಣಾಯಕನಪುರದ ಮನೆಯೊಂದರಲ್ಲಿ ಮಹಿಳೆಗೆ ಮಾನಸಿಕ ಸಮಸ್ಯೆ ಎದುರಾಗಿತ್ತು. ಜನರು ಆಕೆಗೆ ದೆವ್ವ ಹಿಡಿದಿದೆ ಎಂದು ಹೇಳುತ್ತಿದ್ದರು. ಹೀಗಾಗಿ ಈ ಸಮಸ್ಯೆಯನ್ನು ಹೋಗಲಾಡಿಸಬೇಕೆಂದು ಕಾವಾಣಾಪುರದ ಬಸಪ್ಪನನ್ನು ಕರೆಸಲಾಗಿತ್ತು.
ಬಸಪ್ಪ ಮನೆಗೆ ಕಾಲಿಟ್ಟಾಗ ಆ ಮನೆಯಲ್ಲಿ ಮಹಿಳೆಯ ಪುಟ್ಟ ಮಗು ತೊಟ್ಟಿಲಿನಲ್ಲಿ ಅಳುತ್ತಿತ್ತು. ಈ ವೇಳೆ ಮಗು ಅಳುತ್ತಿದ್ದ ಶಬ್ದವನ್ನು ಕೇಳಿಸಿಕೊಂಡ ಬಸಪ್ಪ, ಶಬ್ದವನ್ನು ಆಲಿಸಿ ಮಗುವಿದ್ದ ಕೋಣೆಗೆ ಹೋಗಿ, ಮಗುವನ್ನೇ ಒಂದು ನಿಮಿಷದ ಕಾಲ ನೋಡುತ್ತಾ ನಿಂತಿತು. ಬಳಿಕ ತನ್ನ ಕೊಂಬಿನಿಂದ ತೊಟ್ಟಿಲನ್ನು ತೂಗಲು ಪ್ರಾರಂಭಿಸಿತು. ಒಂದು ಕಡೆ ಬಸಪ್ಪ ತೊಟ್ಟಿಲನ್ನು ತೂಗುತ್ತಿದ್ದರೆ, ಇನ್ನೊಂದೆಡೆ ಅಳುತ್ತಲೇ ತೊಟ್ಟಿಲಲ್ಲಿದ್ದ ಮಗು ಬಸಪ್ಪನನ್ನು ನೋಡುತಿತ್ತು. ಬಳಿಕ ಮಗು ತನ್ನ ಅಳುವನ್ನು ನಿಲ್ಲಿಸಿ ಕಣ್ಣು ಮುಚ್ಚಿ ಮಲಗಿತು. ಬಸಪ್ಪನ ಈ ಪವಾಡವನ್ನು ಕಂಡ ಜನರು ಅಚ್ಚರಿಪಟ್ಟರು.
ಮಗು ಮಲಗಿದ ನಂತರ ಸಮಸ್ಯೆ ಇರುವ ಮಹಿಳೆಯನ್ನು ಬಸಪ್ಪನ ಮುಂದೆ ನಿಲ್ಲಿಸಲಾಯಿತು. ನಂತರ ಬಸಪ್ಪ ಆ ಮಹಿಳೆಗೆ ಆಶೀರ್ವಾದ ಮಾಡಿದ ನಂತರ ಆಕೆಯ ಸಮಸ್ಯೆ ದೂರವಾಗಿದೆ ಎಂದು ಜನರು ಹೇಳುತ್ತಿದ್ದಾರೆ. ರಾಮನಗರದ ಕಾವಾಣಾಪುರದ ಬಸಪ್ಪ ಹಾಗೂ ಚಿಕ್ಕರಸಿನಕೆರೆಯ ಕಾಲಭೈರವೇಶ್ವರ ಬಸಪ್ಪ ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಪವಾಡಗಳನ್ನು ಮಾಡುವ ಮೂಲಕ ಜನರನ್ನು ಅಚ್ಚರಿ ಪಡಿಸುತ್ತಿವೆ. ಅಲ್ಲದೆ ಪವಾಡಗಳ ಮೂಲಕ ಸಾಕಷ್ಟು ಸಮಸ್ಯೆಗಳಿಗೆ ಈ ಬಸಪ್ಪಗಳು ಪರಿಹಾರವನ್ನು ಸಹ ನೀಡಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.