-ಕೆರಗೋಡು ಠಾಣೆಯಲ್ಲಿ 3, ಮಂಡ್ಯ ಪಶ್ಚಿಮ ಠಾಣೆಯಲ್ಲಿ 50 ಮಂದಿ ವಿರುದ್ಧ ಪ್ರಕರಣ
ಮಂಡ್ಯ: ಧ್ವಜಸ್ತಂಭದಿಂದ ಹನುಮಧ್ವಜ (Hanuma Flag) ತೆರವುಗೊಳಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದ ಹಿಂದೂ ಕಾರ್ಯಕರ್ತರ (Hindu Workers) ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಹನುಮಧ್ವಜ ತೆರವು ವೇಳೆ ಪ್ರತಿಭಟನೆ ನಡೆಸಿದ್ದ ಮೂವರು ಹಿಂದೂ ಕಾರ್ಯಕರ್ತರ ವಿರುದ್ಧ ಮಂಡ್ಯ (Mandya) ತಾಲೂಕಿನ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಳಿದೇಗಲು ಗ್ರಾಮದ ಪ್ರತಾಪ್, ಹೊನಗವಳ್ಳಿ ಮಠ ಗ್ರಾಮದ ಅವಿನಾಶ್, ಕೆರಗೋಡು ಗ್ರಾಮದ ಪ್ರಕಾಶ್ ಸೇರಿ ಇತರರ ವಿರುದ್ಧ ಎಫ್ಐಆರ್ ಆಗಿದೆ. ಇದನ್ನೂ ಓದಿ: ಕೆರಗೋಡಿನಲ್ಲಿ ತಾರಕಕ್ಕೇರಿದ ಹನುಮ ಧ್ವಜ ಸಂಘರ್ಷ- ಫೆ.9ಕ್ಕೆ ಮಂಡ್ಯ ಬಂದ್ಗೆ ಕರೆ
ಜನವರಿ 28 ರಂದು ಪ್ರತಿಭಟನೆ ನಡೆಸಲಾಗಿತ್ತು. ಹನುಮಧ್ವಜ ತೆರವು ವಿರೋಧಿಸಿ ನೂರಾರು ಮಂದಿಯಿಂದ ಪ್ರತಿಭಟಿಸಿದ್ದರು. ಈ ವೇಳೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನ ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಲಾಗಿತ್ತು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ದೂರಿನನ್ವಯ, ಐಪಿಸಿ ಸೆಕ್ಷನ್ 143, 304, 353, 149 ಅಡಿ ಪ್ರಕರಣ ದಾಖಲಿಸಲಾಗಿದೆ.
ಇದಲ್ಲದೇ, ಪ್ರತಿಭಟನಾಕಾರರ ಮೇಲೆ ಮತ್ತೆರಡು ಎಫ್ಐಆರ್ ದಾಖಲಿಸಲಾಗಿದೆ. ನಿನ್ನೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದವರ ಮೇಲೂ ಕೇಸ್ ಹಾಕಲಾಗಿದೆ. ಮಂಡ್ಯದ ಪಶ್ಚಿಮ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿವೆ. ಡಿವೈಎಸ್ಪಿ ಶಿವಮೂರ್ತಿ ದೂರಿನನ್ವಯ 8 ಹಾಗೂ ಇತರೆ 50 ಮಂದಿ ವಿರುದ್ಧ ಎಫ್ಐಆರ್ ಆಗಿದೆ. ಇದನ್ನೂ ಓದಿ: ಹನುಮಂತನ ಕೆಣಕಿದ್ದಕ್ಕೆ ಲಂಕ ದಹನವಾಯ್ತು, ಅದೇ ರೀತಿ ನಿಮ್ಮ ಅವನತಿಯಾಗುತ್ತೆ: ಹೆಚ್ಡಿಕೆ ವಾಗ್ದಾಳಿ
ಪ್ರಕಾಶ್, ಆರಾಧ್ಯ, ಬಸವರಾಜು, ಕಾಂತ, ಅವಿನಾಶ್, ಅಭಿ ಪಾಟೀಲ್, ಶಿವಕುಮಾರ್, ಸೋಮಶೇಖರ್ ಸೇರಿದಂತೆ ಇತರೆ 50 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪಾದಯಾತ್ರೆ ವೇಳೆ ಮಂಡ್ಯದ ಮಹವೀರ ಸರ್ಕಲ್ನಲ್ಲಿ ಬ್ಯಾನರ್ ಹಾಗೂ ಸಾರ್ವಜನಿಕರ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಅಕ್ರಮವಾಗಿ ಗುಂಪು ಕಟ್ಟಿಕೊಂಡು ಪೊಲೀಸರ ಕೆಲಸಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಜಿಲ್ಲೆ ಕುರುಬರ ಸಂಘದ ಕಾರ್ಯದರ್ಶಿ ಶಶಿಧರ್ ಎಂಬವರ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ. ಪಾದಯಾತ್ರೆ ವೇಳೆ ಕುರುಬರ ಸಂಘದ ಆವರಣದಲ್ಲಿರುವ ವಿದ್ಯಾರ್ಥಿ ನಿಲಯದ ಕಿಟಕಿ ಗಾಜುಗಳನ್ನ ಕಲ್ಲು, ದೊಣ್ಣೆಗಳಿಂದ ಹೊಡೆದು ಹಾಕಿದ್ದಾರೆ. ಅಕ್ರಮವಾಗಿ ಸಂಘದ ಆವರಣಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆಂದು ದೂರು ನೀಡಲಾಗಿತ್ತು. ಇದನ್ನೂ ಓದಿ: ಹನುಮಧ್ವಜ ಸಂಘರ್ಷ; ರಾಜ್ಯಾದ್ಯಂತ ಹೋರಾಟದ ಕಿಚ್ಚು – ಮಂಡ್ಯದಲ್ಲಿಂದು ಹೆಚ್ಡಿಕೆ, ರೆಡ್ಡಿ ಪಾದಯಾತ್ರೆ