ಮಂಡ್ಯ: ರಣಕಣದಲ್ಲಿ ಪ್ರಚಾರದ ಭರಾಟೆ ಜೋರಾಗಿರುವಂತೆ ನಿಖಿಲ್ ವಿರುದ್ಧ ದೂರುಗಳ ಮೇಲೆ ದೂರುಗಳು ದಾಖಲಾಗಿವೆ.
ಸೋಮವಾರ ಅದ್ಧೂರಿಯಾಗಿ ನಾಮಪತ್ರ ಸಲ್ಲಿಸಿದ್ದ ನಿಖಿಲ್ ಕುಮಾರಸ್ವಾಮಿ ಹಲವು ವಿಚಾರಗಳಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಹಿರಂಗ ಸಮಾವೇಶ ನಡೆದ ಕಾವೇರಿ ಪಾರ್ಕ್ ಹಾಳಾಗಿದೆ. ಮೆರವಣಿಗೆ ವೇಳೆ ಹಸಿರು ಬಣ್ಣದ ಸಿಡಿಮದ್ದು ಸಿಡಿಸಲಾಗಿದೆ ಮತ್ತು ಮೆರವಣಿಗೆಯಿಂದ ಟ್ರಾಫಿಕ್ ಜಾಮ್ ಉಂಟಾದ ಬಗ್ಗೆ ದೂರು ದಾಖಲಾಗಿದೆ.
ಮಂಡ್ಯದಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಿರುವ ಸಿಎಂ ಕುಮಾರಸ್ವಾಮಿ ಮಗನ ಪರ ಪ್ರಚಾರ ಇನ್ನಷ್ಟು ಚುರುಕುಗೊಳಿಸಲು ನಿರ್ಧರಿಸಿದಂತಿದೆ.
ಕಳೆದ ಎರಡು ದಿನಗಳಿಂದ ಮಂಡ್ಯದಲ್ಲೇ ಬಹುತೇಕ ಸಮಯ ಕಳೆದಿರುವ ಮುಖ್ಯಮಂತ್ರಿ, ಬುಧವಾರ ಸಹ ಬಿರುಸಿನಿಂದ ಪ್ರಚಾರ ನಡೆಸಲಿದ್ದಾರೆ. ಮಂಡ್ಯ ತಾಲೂಕಿನ ಹಲವೆಡೆ ಇಂದು ಎಚ್ಡಿಕೆ ಪ್ರಚಾರ ನಡೆಯಲಿವೆ. ಈ ವೇಳೆ ಮೈತ್ರಿಯಿಂದ ಮುನಿಸಿಕೊಂಡಿರುವ ಕಾಂಗ್ರೆಸ್ ಪಕ್ಷದ ಮುಖಂಡರ ಮನೆಗಳಿಗೂ ಭೇಟಿ ನೀಡಲಿರುವ ಸಿಎಂ, ಮನವೊಲಿಕೆ ಯತ್ನ ಮಾಡಲಿದ್ದಾರೆ.