ಬೆಂಗಳೂರು: ಮಂಡ್ಯ ಕ್ಷೇತ್ರ ಈ ಬಾರಿಯ ಲೋಕಸಭಾ ಚುನಾವಣೆಯ ಸ್ಟಾರ್ ಕ್ಷೇತ್ರವಾಗಿ ಗುರುತಿಸಿಕೊಂಡಿದ್ದು, ಇಂದು ಸಾವಿರಾರು ಬೆಂಬಲಿಗರ ನಡುವೆ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸಿದರು. ಇದರ ಬೆನ್ನಲ್ಲೇ ಮಂಡ್ಯ ಕಾಂಗ್ರೆಸ್ ನಾಯಕರ ಸಭೆಯನ್ನ ಸಚಿವ ಡಿಕೆ ಶಿವಕುಮಾರ್ ಅವರು ಕರೆದಿದ್ದಾರೆ.
ನಾಮಪತ್ರ ಸಲ್ಲಿಸಿದ ಬಳಿಕ ಸಮಾವೇಶ ನಡೆಸಿ ಮಾತನಾಡಿದ ಸುಮಲತಾ ಅವರಿಗೆ ಅಪಾರ ಪ್ರಮಾಣದಲ್ಲಿ ಜನ ಬೆಂಬಲ ಲಭ್ಯವಾಗಿತ್ತು. ಇದನ್ನು ಕಂಡ ದೋಸ್ತಿ ಪಕ್ಷ ನಾಯಕರು ದಿಢೀರ್ ಎಂದು ಪಕ್ಷದ ನಾಯಕರ ಸಭೆ ಕರೆದಿದ್ದಾರೆ.
ಸುಮಲತಾ ಅವರಿಗೆ ಇಂದು ಕ್ಷೇತ್ರದಲ್ಲಿ ಸಿಕ್ಕ ಜನಬೆಂಬಲದ ನಡುವೆಯೂ ಹಲವು ಜಿಲ್ಲಾ ನಾಯಕರು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಪರಿಣಾಮ ಸಿಎಂ ಕುಮಾರಸ್ವಾಮಿ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ವೇದಿಕೆಯಲ್ಲಿ ನಿಂತು ಭಾಗವಹಿಸಿ ಅತೃಪ್ತ ಕಾಂಗ್ರೆಸ್ಸಿಗರು ಬಹಿರಂಗ ಬೆಂಬಲ ನೀಡಿದ ಕಾರಣ ಸಿಎಂ ಎಚ್ಡಿಕೆ, ಸಚಿವ ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಪರಿಣಾಮ ಡಿಕೆ ಶಿವಕುಮಾರ್ ಇಂದೇ ಸಭೆ ಕರೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಸುಮಲತಾ ಅವರಿಗೆ ಬೆಂಬಲ ನೀಡಿರುವ ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡರ ಮನವೊಲಿಸಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ ಎನ್ನಲಾಗಿದ್ದು, ಮುಖಂಡರ ಅಸಮಾಧಾನಗಳನ್ನ ಸರಿಪಡಿಸುವ ಜವಾಬ್ದಾರಿಯನ್ನು ಡಿಕೆಶಿ ಹೊರಲಿದ್ದಾರೆ. ಆ ಮೂಲಕ ನಿಖಿಲ್ ಕುಮಾರಸ್ವಾಮಿರ ಗೆಲುವಿಗೆ ಶ್ರಮಿಸಲಿದ್ದಾರೆ ಎನ್ನಲಾಗಿದೆ.